ಬೆಳ್ತಂಗಡಿ: ನೊಂದ ಕುಟುಂಬಗಳಿಗೆ ಸಾಂತ್ವನ ನೀಡುವ ಜೊತೆಗೆ ಯುವಜನತೆಯಲ್ಲಿ ಸ್ನೇಹ, ಸೌಹಾರ್ದತೆ ಮತ್ತು ಸಂಘಟನಾ ಮನೋಭಾವವನ್ನು ಬೆಳೆಸುವ ಕಾರ್ಯದಲ್ಲಿ ಯುವವಾಹಿನಿಯ ಪಾತ್ರ ಶ್ಲಾಘನೀಯವಾಗಿದೆ ಎಂದು ವಿವಿಧ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಶ ಸಂಭ್ರಮದ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟ ಹಾಗೂ ಸಾಂತ್ವನ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಂಗೇರ ಬ್ರಿಗೇಡ್ ಅಧ್ಯಕ್ಷ ಬಿನುತಾ ಬಂಗೇರ ಮಾತನಾಡಿ, ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಜೊತೆಗೆ ಮನಸ್ಸಿಗೆ ಧೈರ್ಯ ತುಂಬುವ ಸಂಘಟನೆ ಯುವವಾಹಿನಿಯಾಗಿದೆ. ಇಂತಹ ಸಂಘಟನೆಗಳು ಯಾವುದೇ ರಾಜಕೀಯ ಪ್ರಭಾವವಿಲ್ಲದೆ ಸಮಾಜಸೇವೆಯಲ್ಲಿ ತೊಡಗಬೇಕು ಎಂದು ಹೇಳಿದರು. ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ ಕ್ರೀಡಾಕೂಟವನ್ನು ಉದ್ಘಾಟಿಸಿ, ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಯುವ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪಿತಾಂಬರ ಹೆರಾಜೆ ಯುವವಾಹಿನಿಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಶುಭ ಹಾರೈಸಿದರು.

ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಸಹಕಾರದೊಂದಿಗೆ, ದಿನಾಂಕ 04-01-2026ರಂದು ಬೆಳ್ತಂಗಡಿ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ದಶ ಸಂಭ್ರಮದ ಪ್ರಯುಕ್ತ ಯುವವಾಹಿನಿ ದಶ ಸ್ಪಂದನ ಸಾಂತ್ವನ ನಿಧಿ ವಿತರಣೆ, 8 ತಂಡಗಳ ಬಿಡ್ಡಿಂಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರು–ಪುರುಷರಿಗೆ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎರಡು ಅಶಕ್ತ ಕುಟುಂಬಗಳಿಗೆ ಸಾಂತ್ವನ ನಿಧಿ ವಿತರಿಸಲಾಯಿತು. ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕ ಹಾಗೂ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ಸ್ವಾಗತಿಸಿ ಪ್ರಸ್ತಾವನಾ ಮಾತುಗಳನ್ನಾಡಿದರು. ಘಟಕದ ಮಾಜಿ ಅಧ್ಯಕ್ಷ ಅಶ್ವಥ್ ಕುಮಾರ್ ವಂದಿಸಿದರು.
ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿ 16 ಪಂದ್ಯಗಳು ನಡೆಯಿತು. ಅಂತಿಮ ಪಂದ್ಯದಲ್ಲಿ ಅಶ್ವಥ್ ಕುಮಾರ್ ಮಾಲಿಕತ್ವದ ಯಮಃ ಜಯಶ್ರೀ ಮೋಟರ್ಸ್, ಬೆಳ್ತಂಗಡಿ ತಂಡ ಪ್ರಥಮ ಸ್ಥಾನ ಪಡೆದು ₹20,000 ನಗದು ಬಹುಮಾನ ಹಾಗೂ ಯುವವಾಹಿನಿ ಟ್ರೋಫಿ–2026 ಗೆದ್ದುಕೊಂಡಿತು. ದ್ವಿತೀಯ ಸ್ಥಾನವನ್ನು ಪ್ರದೀಪ್ ಪೂಜಾರಿ ಮಾಲಿಕತ್ವದ ಅಯಾನ್ ಪೂಜಾರಿ ಕಾಶಿಪಟ್ನ ತಂಡ ಪಡೆದು ₹10,000 ನಗದು ಬಹುಮಾನಕ್ಕೆ ಪಾತ್ರವಾಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೈಯಕ್ತಿಕ ಪ್ರಶಸ್ತಿಗಳಾಗಿ, ಅತ್ಯುತ್ತಮ ಬ್ಯಾಟ್ಸ್ಮನ್ – ಸಚಿನ್ (ಜಯಶ್ರೀ ಮೋಟರ್ಸ್), ಅತ್ಯುತ್ತಮ ಬೌಲರ್ – ಕೌಶಿಕ್ (ಅಯಾನ್ ಪೂಜಾರಿ ಕಾಶಿಪಟ್ನ), ಬೆಸ್ಟ್ ಆಲ್ರೌಂಡರ್ – ನಿಖಿಲ್ ಅರ್ವ (ಜಯಶ್ರೀ ಮೋಟರ್ಸ್) ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ – ಮನು ಮದ್ದಡ್ಕ (ಜಯಶ್ರೀ ಮೋಟರ್ಸ್) ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ತೀರ್ಪುಗಾರರಾಗಿ ಶೇಖರ್ ಉಜಿರೆ, ದಿನೇಶ್ ಉಜಿರೆ, ಮಧುವನ್ ಉಜಿರೆ ಹಾಗೂ ಹರ್ಷಿತ್ ಬೆಳ್ತಂಗಡಿ ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯಲ್ಲಿ ಗುರುಪ್ರಸಾದ್ ಉಜಿರೆ ಹಾಗೂ ಕಾರ್ಯಕ್ರಮ ನಿರೂಪಣೆಯಲ್ಲಿ ಆಕಾಶ್ ಗೇರುಕಟ್ಟೆ ಸಹಕರಿಸಿದರು.
ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸ್ನೇಹ–ಸಿಂಚನಾ ಬುಡೆಂಗೊಟ್ಟು ತಂಡ ಪ್ರಥಮ ಹಾಗೂ ಮೌಲ್ಯ–ಸಿಂಚನ ಧರ್ಮಸ್ಥಳ ತಂಡ ದ್ವಿತೀಯ ಸ್ಥಾನ ಪಡೆದಿತು. ಪುರುಷರ ಶಟಲ್ ಬ್ಯಾಡ್ಮಿಂಟನ್ನಲ್ಲಿ ಗೌತಮ್–ಸೃಜನ್ ಕುವೆಟ್ಟು ತಂಡ ಪ್ರಥಮ ಹಾಗೂ ದೀಕ್ಷಿತ್–ಪ್ರಣೀತ್ ಪೂಜಾರಿ ಕುವೆಟ್ಟು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ ಮಾತನಾಡಿ, ಯುವವಾಹಿನಿಯ ಸೇವಾ ಹಾಗೂ ಸಂಘಟನಾ ಕಾರ್ಯಗಳು ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಉಪಾಧ್ಯಕ್ಷ ಸುಂದರ ಪೂಜಾರಿ, ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಿರಿಯರು, ಕ್ರೀಡಾ ತಂಡಗಳ ಮಾಲಕರು, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ಸಾವ್ಯ, ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಬೆಳ್ತಂಗಡಿ ಘಟಕದ ಪದಾಧಿಕಾರಿಗಳು, ನಿರ್ದೇಶಕರು, ಸಲಹೆಗಾರರು, ಮಹಿಳಾ ಸಂಚಾಲನ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಭರಪೂರ ಬೆಂಬಲ ನೀಡಿದರು. ಸಹಕರಿಸಿದ ಎಲ್ಲರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.


