ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಯುವಸಿಂಚನ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿಯ 2025–26ನೇ ಸಾಲಿನ ಪ್ರಥಮ ಸಭೆಯು 2026ರ ಜನವರಿ 5ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಒಂದು ವರ್ಷದ ಪತ್ರಿಕಾ ಹಾಗೂ ಜಾಲತಾಣ ಕಾರ್ಯಚಟುವಟಿಕೆಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಚಿಂತನೆ, ಚರ್ಚೆ ಮತ್ತು ನಿರ್ಧಾರಗಳೊಂದಿಗೆ ಸಭೆ ಅರ್ಥಪೂರ್ಣವಾಗಿ ಜರುಗಿತು.

35 ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ ಪ್ರತಿಯೊಂದು ಘಟಕದ ಚಟುವಟಿಕೆಗಳಿಗೂ ಸಮಾನ ಪ್ರಚಾರ ದೊರಕಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ಗೌರವ ಸಂಪಾದಕ ಅಶೋಕ್ ಕುಮಾರ್ ಪಡ್ಪು, ನವಿಲಿನ ನಾಟ್ಯದಂತೆ ದೊಡ್ಡ ವೇದಿಕೆಗಳಿಗೂ, ಪ್ರತಿ ಘಟಕದ ಶ್ರಮ ಮತ್ತು ಸಾಧನೆಗಳಿಗೂ ಸಮಾನ ಮಹತ್ವ ನೀಡಬೇಕು. ಸಮಾನತೆಯೇ ಸಂಘಟನೆಯ ಸೌಂದರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಘಟಕಗಳಿಂದ ಯುವಸಿಂಚನ ಪತ್ರಿಕೆ ಹಾಗೂ ಜಾಲತಾಣಕ್ಕೆ ಬರುವ ವರದಿಗಳು ಕೇವಲ ಮಾಹಿತಿ ನೀಡುವಂತಲ್ಲ, ಓದುಗರನ್ನು ಸೆಳೆಯುವಂತೆ ಜೀವಂತವಾಗಿರಬೇಕು. ಸಂಪಾದಕ ಮಂಡಳಿಯ ಪ್ರತಿಯೊಬ್ಬ ಸದಸ್ಯರೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗಲೇ ಈ ವರ್ಷದ ಸಂಪಾದಕ ಮಂಡಳಿ ಮಾದರಿಯಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಸಂಪಾದಕ ರಾಜೇಶ್ ಸುವರ್ಣ ಮನವಿ ಮಾಡಿದರು.

ಸಭೆಯಲ್ಲಿ, ವೈಚಾರಿಕ ಲೇಖನಗಳೊಂದಿಗೆ ಯುವಸಿಂಚನ ಪತ್ರಿಕೆಗೆ ಹೊಸತನದ ಸ್ಪರ್ಶ ನೀಡುವುದು, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಘಟಕಗಳ ಕಾರ್ಯಚಟುವಟಿಕೆಗಳ ವರದಿಗಳು ಕ್ಷಿಪ್ರವಾಗಿ ಪ್ರಕಟವಾಗುವಂತೆ ವ್ಯವಸ್ಥೆ ರೂಪಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.


ಈ ಸಭೆಯಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾಲತಾ, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಹಾಗೂ ಯುವಸಿಂಚನ ಮತ್ತು ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿಯ ಸದಸ್ಯರಾದ ಭವಾನಿ ಕೆ ಮತ್ತು ಲತೀಶ್ ಎಂ ಸಂಕೋಳಿಗೆ ಉಪಸ್ಥಿತರಿದ್ದರು.

ಯುವಸಿಂಚನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಹರೀಶ್ ವಿ. ಪಚ್ಚನಾಡಿ ಸ್ವಾಗತಿಸಿ, ಸಂಪಾದಕ ಮಂಡಳಿಯ ಸದಸ್ಯೆ ಉಷಾ ಕೆ ಧನ್ಯವಾದ ಸಲ್ಲಿಸಿದರು.






