ಮಂಗಳೂರು : ಅಂಕಗಳೊಂದೇ ವಿದ್ಯಾರ್ಥಿಯ ಮೌಲ್ಯವಲ್ಲ, ಅವನೊಳಗಿನ ಶಿಸ್ತು, ಶ್ರಮ ಮತ್ತು ಸತ್ಪ್ರವೃತ್ತಿಯೇ ನಿಜವಾದ ಮಾನದಂಡ. ಹೆತ್ತವರ ಕನಸುಗಳನ್ನು ಗೌರವದಿಂದ ಹೊತ್ತು ಮುಂದೆ ಸಾಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿ ವೇತನ ದಾನವಲ್ಲ, ಸಮಾಜ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತ. ಈ ಅವಕಾಶವನ್ನು ಜ್ಞಾನಾರ್ಜನೆಗೆ ಮಾತ್ರವಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೂ ಬಳಸಿ. ಇಂದು ಪಡೆದ ನೆರವು ನಾಳೆ ಸಮಾಜಕ್ಕೆ ಕೊಡುಗೆಯಾಗುವ ಶಕ್ತಿಯಾಗಲಿ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ತಿಳಿಸಿದರು.

ಅವರು ಯುವವಾಹಿನಿ ಕೇಂದ್ರ ಸಮಿತಿಯ ವಿದ್ಯಾನಿಧಿ ಟ್ರಸ್ಟ್ ಆಶ್ರಯದಲ್ಲಿ ಡಿಸೆಂಬರ್ 13 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ ಸುವರ್ಣ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಅಕ್ಷರ ಪುರಸ್ಕಾರ, ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಮೂಳೆ ಕೀಲು ಶಸ್ತ್ರ ಚಿಕಿತ್ಸಕರಾದ ಡಾ ಉಜ್ವಲ್ ಸುವರ್ಣ ಇವರು ಸಂಪನ್ಮೂಲ ವ್ಯಕ್ತಿಯಾಗಿ ಪ್ರೇರಣಾ ವಾಹಿನಿ-2025 ಕಾರ್ಯಾಗಾರ ನಡೆಸಿಕೊಟ್ಟರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ ಸಮಾರಂಭ ಉದ್ಘಾಟಿಸಿದರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ವಿಭಾಗದ ಮುಖ್ಯಸ್ಥರು ಹಾಗೂ ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ಡಾ. ಸದಾನಂದ ಪೂಜಾರಿ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಕಾರ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಕ್ಷರ ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ : ಪಿಯುಸಿಯಲ್ಲಿ ಶೇಕಡಾ 95 ಕ್ಕಿಂತ ಅಧಿಕ ಅಂಕ ಪಡೆದ ನಿಯತಿ ಎಮ್ ಅಮೀನ್, ಸಾನ್ವಿ ಎಸ್ ಪೂಜಾರಿ, ಆತ್ಮಿ ಕೆ, ಸುದೀಕ್ಷಾ, ತ್ರೀಕ್ಷಾ, ಸನ್ನಿಧಿ ಡಿ ಎಸ್, ಹಿಮಾಂಷು ಕೆ ಅಮೀನ್, ಸುಧಾನ್ ಆರ್ ಎಸ್, ಸಾತ್ವಿ, ತುಷಾರ್ ಜೆ, ಸಂದೇಶ್ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 98 ಕ್ಕಿಂತ ಅಧಿಕ ಅಂಕ ಪಡೆದ ಕುಶಿ, ಧನ್ಯ, ನಿರೀಕ್ಷಾ ಪೂಜಾರಿ ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ಪ್ರದಾನ ಮಾಡಲಾಯಿತು ಕ್ರೀಡಾ ಕ್ಷೇತ್ರದ ಸಾಧಕಿ ವಂಶಿ ಪೆರ್ಮಂಕಿ, ಶಿಶಿರ್ ಜೆ ಸಾಲ್ಯಾನ್, ವಿಕ್ರೀತಾ, ಬಹುಮುಖ ಪ್ರತಿಭೆ ಯುವ ನ್ಯಾಯವಾದಿ ತ್ರಿಶಾ ಎಚ್ ಸುವರ್ಣ, ಲಿಷಾ ಡಿ ಎಸ್, ಇವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹಾಗೂ ನಿಯೋಜಿತ ಎರಡನೇ ಉಪಾಧ್ಯಕ್ಷ ಸುರೇಶ್ ಪೂಜಾರಿ ಪುರಸ್ಕೃತ ವಿದ್ಯಾರ್ಥಿಗಳನ್ನು ಪರಿಚಯಿಸಿದರು.

ವಿದ್ಯಾರ್ಥಿ ವೇತನ ವಿತರಣೆ : ಒಟ್ಟು 69 ಅರ್ಹ ವಿದ್ಯಾರ್ಥಿಗಳಿಗೆ ರೂ ಮೂರು ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು, ಉಪಾಧ್ಯಕ್ಷೆ ವಿದ್ಯಾ ರಾಕೇಶ್ ವಿದ್ಯಾರ್ಥಿಗಳ ವಿವರ ಪ್ರಕಟಿಸಿದರು ವಿದ್ಯಾನಿಧಿ ಟ್ರಸ್ಟ್ ಮೆನೆಜಿಂಗ್ ಟ್ರಸ್ಟೀ ಹರೀಶ್ ಕೆ ಪೂಜಾರಿ ಪ್ರಸ್ತಾವನೆ ಮಾಡಿದರು, ಕಾರ್ಯದರ್ಶಿ ಜಗದೀಶ್ಚಂದ್ರ ಡಿ ಕೆ ಸ್ವಾಗತಿಸಿದರು, ಕೋಶಾಧಿಕಾರಿ ವಿನೋದರ ಪೂಜಾರಿ ವಂದಿಸಿದರು.ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.



