ದಿನಾಂಕ 29-07-2025: ಕಷ್ಟಕರವಾದ ಭಾರತದ ಗಡಿ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಬಿಸಿಲು, ಮಳೆ, ಕೊರೆಯುವ ಚಳಿಯ ನಡುವೆಯೂ ಭಾರತೀಯರಿಗೆ ರಕ್ಷಣೆ ನೀಡುತ್ತಿರುವ ನಮ್ಮ ಸೈನಿಕರ ಸಾಮರ್ಥ್ಯ ನಿಜವಾಗಿಯೂ ಹೆಮ್ಮೆಯ ವಿಷಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹೇಳಿದರು.
ಅವರು ಘಟಕದಲ್ಲಿ ನಡೆದಂತಹ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಹೆಚ್ಚಿನ ಹೆತ್ತವರು ಬಯಸುತ್ತಾರೆ. ಆದರೆ ತನ್ನ ಮಗ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಲಿ ಎಂದು ಪ್ರೋತ್ಸಾಹಿಸಿದ ಹೆತ್ತವರಿಗೆ ನಿಜವಾಗಿಯೂ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದರು.
ಅತಿಥಿಗಳಾಗಿದ್ದ ನಿವೃತ್ತ ಯೋಧರಾದ ಜನಾರ್ದನ್ ಕರ್ಕೇರ ಮಾತನಾಡಿ ತನ್ನ ಕುಟುಂಬದಿಂದ ದೂರ ಬಂದು ಕಷ್ಟಕರವಾದ ವಾತಾವರಣದಲ್ಲಿ ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಆರೋಗ್ಯ ಉತ್ತಮವಾಗಿರಲಿ ಎಂದು ಪ್ರತಿಯೊಬ್ಬ ಭಾರತೀಯನು ದೇವರಲ್ಲಿ ಪ್ರಾರ್ಥಿಸಬೇಕೆಂದರು.
ಇನ್ನೋರ್ವ ಅತಿಥಿ ನಿವೃತ್ತ ಯೋಧ ಪ್ರಶಾಂತ್ ಶೆಟ್ಟಿಗಾರ್ ಗೋಳಿಜೋರ ಯಾವುದೇ ದೇಶವು ಯುದ್ಧವನ್ನು ಬಯಸುವುದಿಲ್ಲ ಆದರೆ ಕೆಲವೊಂದು ದೇಶದೊಳಗಿನ ಆಂತರಿಕ ವಿಷಯಗಳು ಯುದ್ಧಕ್ಕೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರಾದ ಅಶೋಕ್ ಅಂಚನ್ ಕೋಡಿಕಲ್ ಮಾತನಾಡಿ ಸೇನೆಯಲ್ಲಿ ಸೇವೆ ಮಾಡಲು ಅವಕಾಶ ದೊರಕದಿದ್ದರೂ ಇಂದು ದೇಶ ಸೇವೆ ಮಾಡಿದಂತಹ ಯೋಧರ ಜೊತೆ ವೇದಿಕೆ ಹಂಚಿಕೊಂಡದ್ದು ಹರ್ಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಜನಾರ್ದನ್ ಕರ್ಕೇರ ಹಾಗೂ ಪ್ರಶಾಂತ್ ಶೆಟ್ಟಿಗಾರ್ ಗೋಳಿಜೋರ ಇವರನ್ನು ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಘಟಕದ ಮಾಜಿ ಅಧ್ಯಕ್ಷರು,ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಸೇವಾ ನಿರ್ದೇಶಕರಾದ ಉಷಾರವರು ಸ್ವಾಗತಿಸಿದರು. ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು ವಂದಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ನಾಗೇಶ್ ಅಮೀನ್ ಮುಲ್ಲಾಕಾಡ್ ಕಾರ್ಯಕ್ರಮ ನಿರೂಪಿಸಿದರು.


