ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025 ಕಾರ್ಯಕ್ರಮವು
ದೈವಜ್ಞ ಸಭಾಭವನ ಜಾಲಹಳ್ಳಿಯಲ್ಲಿ 24 ಆಗಸ್ಟ್ 2025ರ ಭಾನುವಾರ ನೆರವೇರಿತು.
ಬೆಳಿಗ್ಗೆ 9.30ಕ್ಕೆ
ಗುರುಭಜನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ನಾರಾಯಣಗುರುಗಳ ಪ್ರತಿಮೆಗೆ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ವೈದಿಕ ರೀತಿಯಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಸಲಾಯಿತು.
ನಂತರ ಯುವವಾಹಿನಿಯ ನಾಲ್ಕು ತಂಡಗಳಾದ ಯುವ ಬಿರುವೆರ್, ಯುವ ತುಡರ್, ಯುವ ಚಾಲೆಂಜರ್ಸ್ ಮತ್ತು ಯುವ ಪವರ್ ತಂಡದ ಎಲ್ಲಾ ಸದಸ್ಯರನ್ನು ತುಳು ಸಿರಿ ಚಾವಡಿಗೆ ತುಳುನಾಡ ಸಂಪ್ರದಾಯಬದ್ಧವಾಗಿ ಸ್ವಾಗತಿಸಲಾಯಿತು.
ತುಳುನಾಡ ತೆನಸ್ – ತುಳುನಾಡಿನ ಖಾದ್ಯ
ಮೊದಲ ಕಾರ್ಯಕ್ರಮವಾಗಿ “ತುಳುನಾಡ ತೆನಸ್” ಎಂಬ ಆಹಾರ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅಂತರಾಷ್ಟ್ರೀಯ ಖ್ಯಾತಿಯ ಶೆಫ್ ಶ್ರೀ ಭರತನ್ ವೇಣು (ಎಕ್ಸಿಕ್ಯೂಟಿವ್ ಶೆಫ್ ಡೈರೆಕ್ಟರ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಅವರ ನೇತೃತ್ವದಲ್ಲಿ ತೀರ್ಪುಗಾರಿಕೆ ನಡೆಯಿತು. ಎಲ್ಲ ನಾಲ್ಕು ತಂಡಗಳಿಂದಲೂ ಸಿದ್ಧಪಡಿಸಿದ 120ಕ್ಕೂ ಹೆಚ್ಚಿನ ತಿನಿಸುಗಳ ರುಚಿ, ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಅವರು ಮೆಚ್ಚಿದರು.
ತುಳು ಸಭಿ ಸವಾಲ್ – ರಸಪ್ರಶ್ನೆ ಸ್ಪರ್ಧೆ
ಶ್ರೀ ಚಂದ್ರಹಾಸ ಬಳಂಜ ಅವರ ನೇತೃತ್ವದಲ್ಲಿ “ತುಳು ಸಭಿ ಸವಾಲ್” ಎಂಬ ರಸಪ್ರಶ್ನೆ ಸ್ಪರ್ಧೆ ನಡೆಯಿತು. ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಕುರಿತಾದ ಜ್ಞಾನವನ್ನು ವಿಸ್ತರಿಸುವ ಅರ್ಥಪೂರ್ಣ ಸ್ಪರ್ಧೆಯಾಗಿತ್ತು.
ತುಳು ಗೀತೆ ನೃತ್ಯ ಮತ್ತು ತುಳುನಾಡ ತುತ್ತೈತ
ಮಧ್ಯಾಹ್ನದ ಊಟದ ನಂತರ, ತುಳು ಗೀತೆ ನೃತ್ಯ ಮತ್ತು ತುಳುನಾಡ ತುತ್ತೈತ (ಫ್ಯಾಷನ್ ಶೋ) ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳು ತುಳುನಾಡ ಸಂಸ್ಕೃತಿಯ ವೈವಿಧ್ಯತೆ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸಿದವು. ಈ ಸ್ಪರ್ಧೆಗಳ ತೀರ್ಪುಗಾರಿಕೆಯನ್ನು ರಾಷ್ಟ್ರೀಯ ಖ್ಯಾತಿಯ ನೃತ್ಯ ಪಟು ಕು. ರಚನಾ ಅಮೀನ್ ಮುನ್ನಡೆಸಿದರು.
ಪ್ರಶಸ್ತಿ ವಿತರಣೆ ಮತ್ತು ಸಭಾ ಕಾರ್ಯಕ್ರಮ
ಸಂಜೆ 5 ಗಂಟೆಗೆ ಪ್ರಶಸ್ತಿ ವಿತರಣೆ ಸಮಾರಂಭವನ್ನು ಘಟಕದ ಅಧ್ಯಕ್ಷರಾದ ಶ್ರೀ ಶಶಿಧರ ಕೋಟ್ಯಾನ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ದಯಾನಂದ ಬಂಗೇರ, ಡಾ. ಯೋಗೀಶ್ ಕೈರೋಡಿ (ಪ್ರಧಾನ ಭಾಷಣಕಾರರು) ಮತ್ತು ಶ್ರೀ ಚಂದ್ರಹಾಸ ಬಳಂಜ ಹಾಜರಿದ್ದರು.
ವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀ ಸಂತೋಷ್ ಪೂಜಾರಿ ಪಣಪಿಲ, ವ್ಯಕ್ತಿತ್ವ ವಿಕಸನ ನಿರ್ದೇಶಕ ರಾದ ಶ್ರೀ ಸಚೀಂದ್ರ ಕೋಟ್ಯಾನ್ ಮತ್ತು ಶ್ರೀ ಕಿರಣ್ ಪೂಜಾರಿ, ಶ್ರೀ ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಶ್ರೀ ಪುನೀತ್ ಮತ್ತು ಕು. ಧನ್ಯಶ್ರೀ ಉಪಸ್ಥಿತರಿದ್ದರು.
ಶ್ರೀ ಸಚೀಂದ್ರ ಕೋಟ್ಯಾನ್ ಅವರು ಸ್ವಾಗತ ಭಾಷಣ ಮಾಡಿದರು, ಶ್ರೀ ಸಂತೋಷ್ ಪೂಜಾರಿ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ವಿವರಗಳನ್ನು ವಿವರಿಸಿದರು. ಶ್ರೀ ದಯಾನಂದ ಬಂಗೇರ ಅವರು ಯುವವಾಹಿನಿ ತಂಡವು ನಡೆಸಿದ ಈ ಯಶಸ್ವಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಅಧ್ಯಕ್ಷರಾದ ಶ್ರೀ ಶಶಿಧರ ಕೋಟ್ಯಾನ್ ಅವರು ಈ ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಯುವವಾಹಿನಿ ವತಿಯಿಂದ ವರ್ಷಪೂರ್ತಿ ನಡೆಯಲಿರುವ ಹಲವು ಕಾರ್ಯಕ್ರಮಗಳ ಕುರಿತು ವಿವರ ನೀಡಿದರು.
ಸಾಧಕರಾದ ಡಾ. ಯೋಗೀಶ್ ಕೈರೋಡಿ ಹಾಗೂ ಶ್ರೀ ಚಂದ್ರಹಾಸ ಬಳಂಜ ಅವರನ್ನು ಸನ್ಮಾನಿಸಲಾಯಿತು.
ಪ್ರಧಾನ ಭಾಷಣಕಾರರಾದ ಡಾ. ಯೋಗೀಶ್ ಕೈರೋಡಿ ಅವರು ತುಳು ಸಂಸ್ಕೃತಿ, ಪರಂಪರೆ ಹಾಗೂ ನಾರಾಯಣಗುರು ಸ್ವಾಮಿಗಳ ದೃಷ್ಟಿಕೋನ ಕುರಿತು ವಿಸ್ತಾರವಾಗಿ ಮಾತನಾಡಿ ಯುವಕರಿಗೆ ಪ್ರೇರಣಾದಾಯಕ ಚಿಂತನೆಗಳನ್ನು ಹಂಚಿಕೊಂಡರು.
ನಂತರ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ಶ್ರೀ ಸಕೇಶ್ ಧನ್ಯವಾದ ಪ್ರಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಶ್ರುತಿ ಮತ್ತು ಶ್ರೀ ಶಿವಪ್ರಸಾದ್ ನಿರೂಪಣೆ ಮಾಡಿದರು.
ಅಂತಿಮವಾಗಿ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.


