
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ 34ನೇ ವಾರ್ಷಿಕ ಸಮಾವೇಶ ಹಾಗೂ ಪದಗ್ರಹಣ ಸಮಾರಂಭವು ದಿನಾಂಕ 30.01.2022 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್ ಎಸ್ ಸಾಯಿರಾಂ ವಾರ್ಷಿಕ ಸಮಾವೇಶ ಉದ್ಘಾಟಿಸಿದರು.
“ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಕೆಟ್ಟ ವಿಚಾರಗಳನ್ನು ಬಿಸಾಡುವುದೇ “ಯುವ” : ವಿಖ್ಯಾತಾನಂದ ಸ್ವಾಮೀಜಿ
‘ಯುವ’ ಎಂದರೆ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಕೆಟ್ಟ ವಿಚಾರಗಳನ್ನು ಬಿಸಾಡುವುದಾಗಿದೆ. ನೀವು ಯಾರ ಅಸ್ತ್ರವಾಗಲು ಹೋಗಬೇಡಿ ಸಮಾಜದಲ್ಲಿ ನಿಮ್ಮ ಸ್ವಂತದ್ದೇನಾದರು ಸಾಧನೆ ಮಾಡಿ. ಸಮಾಜಕ್ಕೆ ಆದರ್ಶವಾಗುವಂತಹ ಯುವಕರಾಗಿ, ಸಂಕುಚಿತ ಮನೋಭಾವವನ್ನು ಬಿಟ್ಟು, ವಿಶಾಲ ಮನೋಭಾವ ಹೃದಯವನ್ನಿಟ್ಟುಕೊಂಡು ಸಮಾಜ ಸೇವೆಯನ್ನು ಮಾಡಿ ಎಂದು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ ತಿಳಿಸಿದರು.

“ಆರ್ ಎಸ್ ಎಸ್ ಹೊರತುಪಡಿಸಿದರೆ ನಾನು ನೋಡಿದ ಅತ್ಯಂತ ಶಿಸ್ತಿನ ಇನ್ನೊಂದು ಸಂಘಟನೆಯೇ ಯುವವಾಹಿನಿ” – ತಾರಾನಾಥ್ ಹೈಕೋರ್ಟ್ ವಕೀಲರು…!!!
ಯುವವಾಹಿನಿ 34ನೇ ವಾರ್ಷಿಕ ಸಮಾವೇಶ ಹಾಗೂ ಪದಗ್ರಹಣ ಸಮಾರಂಭ ಮುಖ್ಯ ಅತಿಥಿಗಳಾಗಿ ಬೆಂಗಳೂರು ಹೈಕೋರ್ಟ್ ನ ಪದನ್ನೋತಿ ಹಿರಿಯ ವಕೀಲರಾದ ತಾರಾನಾಥ್ ಪೂಜಾರಿ ರವರು ಮಾತನಾಡಿ, ಆರ್.ಎಸ್.ಎಸ್. ಬಿಟ್ಟರೆ ನಾನು ನೋಡಿದ ಅತ್ಯಂತ ಶಿಸ್ತಿನ ಇನ್ನೊಂದು ಸಂಘಟನೆ ಎಂದರೇ ಅದು ಯುವವಾಹಿನಿ ಎಂದು ಹೇಳಿದರು. ಅವರ ಕಾರ್ಯ ದಕ್ಷತೆಗಳು ಬಹಳ ಶಿಸ್ತು ಬದ್ಧವಾಗಿದ್ದು, ಇತರ ಬೇರೆ ಸಂಘಟನೆಗೆ ಮಾದರಿಯಾಗಿದೆ ಎಂದರು.

ಸಾಧಕರಿಗೆ ಸನ್ಮಾನ, ಅಧಿಕಾರ ಸ್ವೀಕಾರ
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮತ್ತು ಐ. ತಾರಾನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದ ಡಾ.ರಾಕೇಶ್ ಕುಮಾರ್, ಡಾ.ರೋಹಿತ್ ಕುಮಾರ್, ಡಾ.ಶ್ರುತಿ, ಡಾ.ವಿನೂತಾ, ಡಾ.ಸೇಷಪ್ಪ ಅಮೀನ್, ಡಾ.ಪ್ರಸಾದ್ ಬಂಗೇರ, ಡಾ.ಅರುಣ್ ಉಳ್ಳಾಲ್ ಅವರನ್ನು ಅಭಿನಂದಿಸಲಾಯಿತು.

ನೂತನ ಪದಾಧಿಕಾರಿಗಳ ಪದಗ್ರಹಣ
ಯುವವಾಹಿನಿ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಪ್ರತಿಜ್ಞಾವಿಧಿ ಬೋಧಿಸಿದರು. ಕೇಂದ್ರ ಸಮಿತಿಯ ನೂತನ ಅಧ್ಯಕ್ಷ ಉದಯ ಅಮೀನ್ಮಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕಿಲ್ಪಾಡಿ, ಉಪಾಧ್ಯಕ್ಷರಾಗಿ ರಾಜೇಶ್ ಬಿ ಮತ್ತು ಹರೀಶ್ ಕೆ. ಪೂಜಾರಿ, ಕೋಶಾಧಿಕಾರಿಯಾಗಿ ಜಗದೀಶ್ಚಂದ್ರ ಡಿ.ಕೆ., ಜತೆ ಕಾರ್ಯದರ್ಶಿಯಾಗಿ ವಿದ್ಯಾ ರಾಕೇಶ್ ಹಾಗೂ ನಿರ್ದೇಶಕರು ಮತ್ತು ಸಂಘಟನಾ ಕಾರ್ಯದರ್ಶಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ರಾಜಾರಾಮ್ರವರು ಕಳೆದೊಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಉದಯ ಅಮೀನ್ ಮಟ್ಟು ಮಾತನಾಡಿ ಸರ್ವರ ಸಲಹೆ ಸೂಚನೆ ಮಾರ್ಗದರ್ಶನದ ಮೂಲಕ ಯುವವಾಹಿನಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ಇದೆ ಎಂದು ತಿಳಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು ವಾರ್ಷಿಕ ವರದಿ ಮಂಡಿಸಿದರು, ಸಮಾವೇಶ ನಿರ್ದೇಶಕರಾದ ಅಜೀತ್ ಕುಮಾರ್ ಪಾಲೇರಿ ಸ್ವಾಗತಿಸಿದರು, ನೂತನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು. ಉಪ್ಪಿನಂಗಡಿ ಘಟಕದ ಸದಸ್ಯರು ಪ್ರಾರ್ಥಿಸಿದರು. ವಾರ್ಷಿಕ ಸಮಾವೇಶದ ಸಂಚಾಲಕ ಕುಶಾಲಪ್ಪ ಹತ್ತುಕಳಸೆ ಹಾಗೂ 33 ಘಟಕಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು


