Yuvavahini

NOV 15, 2018 1.26 PM IST

ಯುವಸಿಂಚನ ಪತ್ರಿಕೆ : ನವೆಂಬರ್ 2018

ಬಿಲ್ಲವರ ಅಸ್ಮಿತೆ : ಬಿ.ಎಮ್. ರೋಹಿಣಿ

ಬಹುಸಂಖ್ಯಾತರಾದ ಹಿಂದುಳಿದ ವರ್ಗದಲ್ಲಿ ಬಿಲ್ಲವರಿಗೊಂದು ವಿಶೇಷ ವಾದ ಅನನ್ಯತೆ ಇದೆ. ಶತಮಾನಗಳ ಹಿಂದೆ ಇವರು ಅಸ್ಪೃಶ್ಯ ಸಮುದಾಯ ದವರಾಗಿದ್ದರು ಎಂಬುದು ಈಗಿನ ಯುವಸಮುದಾಯಕ್ಕೆ ಬಹುಶಃ ತಿಳಿದಿರಲಾರದು. ಭೂತಾರಾಧಕರು ಎಂಬ ಕಾರಣಕ್ಕೆ ಅವರಿಗೆ ದೇವಸ್ಥಾನ ಪ್ರವೇಶ ಇರಲಿಲ್ಲ ಎಂಬ ಮಾತು ನಂಬಲರ್ಹವಲ್ಲ. ಯಾಕೆಂದರೆ ಹಿಂದುಳಿದ ವರ್ಗದ ಬೇರೆ ಸಮುದಾಯದವರು ಭೂತ, ದೈವಗಳನ್ನು ನಂಬುವವರು ಎಂದು ಬಹಿಷ್ಕರಿಸಲಿಲ್ಲ. ಅವರಿಗೆ ದೇವಸ್ಥಾನದ ಅಂಗಳಕ್ಕೆ ಪ್ರವೇಶವಿತ್ತು, ಬಿಲ್ಲವರಿಗೆ ದೇವಸ್ಥಾನದ ಅಂಗಳಕ್ಕೆ ಪ್ರವೇಶ ನಿಷಿದ್ಧ. ಬಿಲ್ಲವರು ದರ್ಶನ ಪಾತ್ರಿಗಳಾದುದರಿಂದ, ಪೂಜಾರಿಗಳೆಂಬ ಗೌರವ ಇರುವುದರಿಂದ ದೇವರಿಗೂ ಭೂತಗಳಿಗೂ ಸರಿಬರದು ಎಂದು ದೇವಸ್ಥಾನದ ಅಂಗಳಕ್ಕೆ ಬಿಲ್ಲವರಿಗೆ ಪ್ರವೇಶ ನಿರಾಕರಿಸಿದರೇ? ಗೊತ್ತಿಲ್ಲ. ಊರಲ್ಲಿ ಹೆಚ್ಚಿನ ದೇವಸ್ಥಾನಗಳ ಪಕ್ಕದಲ್ಲೇ ಅದಕ್ಕೆ ಸಂಬಂಧಿಸಿದ ದೈವಸ್ಥಾನವಿರುವುದನ್ನು ಕಾಣಬಹುದು. ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಾಜ ರೂಪಿಸಿದ ವ್ಯವಸ್ಥೆ ಇದು. ಇಷ್ಟಕ್ಕೂ ದೇವರಿಗೂ ಭೂತಗಳಿಗೂ ವಿಶೇಷ ವ್ಯತ್ಯಾಸವೇನಿಲ್ಲ. ದೇವರುಗಳೂ ಈ ಪ್ರಪಂಚದಲ್ಲಿ ಬಾಳಿ ಬದುಕಿ ಇದ್ದರೆಂದು ನಂಬುತ್ತೇವೆ. ಭೂತಗಳಿಗೂ ಈ ಮಣ್ಣಿನಲ್ಲಿ ಬಾಳಿ ಬದುಕಿದ್ದ ವ್ಯಕ್ತಿಗಳೇ ಆಗಿದ್ದರು ಎಂಬ ಐತಿಹ್ಯಗಳಿವೆ. ಆರಾಧನೆ ಮಾಡುವ ವ್ಯಕ್ತಿಗಳಿಂದಾಗಿ ಅವುಗಳು ಒಳಗೆ ಹೊರಗೆ ಉಳಿದು ಬಿಟ್ಟವು.
ತುಂಬಾ ಹಿಂದಕ್ಕೆ ಹೋಗದೆ ಎರಡು ಶತಮಾನಗಳ ಹಿಂದಕ್ಕೆ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಆದ ಪಲ್ಲಟಗಳು ಸ್ಮರಣೀಯವಾಗಿವೆ. ಬಿಲ್ಲವ ಸಮಾಜದ ಕೆಲವೇ ಮಂದಿ ಅಕ್ಷರಸ್ಥರಾದವರು ಹೊಸ ಚಿಂತನೆಗಳಿಗೆ ತೆರೆದುಕೊಂಡರು. ನಮ್ಮ ಸಮಾಜದ ದುಸ್ಥಿತಿಯ ಬಗ್ಗೆ ಚಿಂತನೆ ಮಾಡಿದರು. ಮಂಗಳೂರಿನಲ್ಲಿ ಬ್ರಹ್ಮ ಸಮಾಜ, ಥಿಯಾಸಾಫಿಕಲ್ ಸೊಸೈಟಿ, ಆರ್ಯ ಸಮಾಜ ಮುಂತಾದ ಸಂಸ್ಥೆಗಳು ಪ್ರಾರಂಭವಾದಾಗ ಅದರ ಸ್ಥಾಪಕ ಸದಸ್ಯರಾಗಿ, ಪೋಷಕರಾಗಿ ಬೆಳೆಸಿದರು. ಅಕ್ಷರಸ್ಥರಿಗೆ ಇರುವ ಗೌರವ, ಸ್ಥಾನಮಾನಗಳು ಅವರನ್ನು ವಿದ್ಯಾಕಾಂಕ್ಷಿಗಳನ್ನಾಗಿ ಮಾಡಿತು. ಬಿಲ್ಲವರಲ್ಲಿ ಆಗ ಜಮೀನ್ದಾರರು ತುಂಬಾ ಮಂದಿ ಇದ್ದರು. ಆದರೆ ಅವರಿಗೆ ಅಕ್ಷರ ಸಂಸ್ಕಾರವಿರಲಿಲ್ಲ. ಅಂ ತಹ ಕೆಲವು ಜಮೀನ್ದಾರರು ಬೋಳೇ ಶಂಕರರಂತೆ ನಡೆದುಕೊಂಡ ಘಟನೆ ಗಳಿವೆ. ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬುವ ಬೋಳೇತನ ಇಂದಿಗೂ ನಮ್ಮ ಸಮಾಜದ ಅನನ್ಯತೆಯಾಗಿಯೇ ಉಳಿದು ಬಿಟ್ಟಿರುವುದು ವಿಷಾದನೀಯ.

1934ರಲ್ಲಿ ಬಾಸೆಲ್ ಮಿಶನ್‍ನವರು ಮಂಗಳೂರಿಗೆ ಬಂದು ಧರ್ಮ ಪ್ರಚಾರ ಕಾರ್ಯ ಆರಂಭಿಸಿದಾಗ ಇಲ್ಲಿನ ಬಿಲ್ಲವರಿಗೆ ಅವಕಾಶದ ಒಂದು ಹೊಸ ಬಾಗಿಲು ಕಾಣಿಸಿತು. ಅಸ್ಪೃಶ್ಯರಾಗಿ, ವಿದ್ಯಾಹೀನರಾಗಿ ಬಾಳುವ ನರಕಕ್ಕಿಂತ ಮತಾಂತರಗೊಂಡು ಶಿಕ್ಷಣ ಪಡೆದು ಘನತೆಯಿಂದ ಬಾಳುವ ಆಸೆಗಳು ಚಿಗುರಿದವು. ಮಿಷನರಿಗಳು ಎಲ್ಲಾ ಜಾತಿಗಳವರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದ ಅವರ ಕಾರ್ಖಾನೆಗಳಲ್ಲಿ ಎಲ್ಲರಿಗೂ ಉದ್ಯೋಗ ನೀಡಿದ್ದರಿಂದ ಬಿಲ್ಲವರು ಭವಿಷ್ಯದ ಬಗ್ಗೆ ಹೊಸ ಹೊಸ ಕನಸುಗಳನ್ನು ಕಟ್ಟಿಕೊಂಡರು. ಒಂದು ಸಲ ನೂರಾರು ಮಂದಿ ಬಿಲ್ಲವರು ಸಭೆ ಸೇರಿ ಒಂದು ಸಮಾರಂಭ ಏರ್ಪಡಿಸಿದರಂತೆ. ಆ ಸಭೆಗೆ ಮಿಶನರಿಗಳ ಪಾದ್ರಿಗಳನ್ನು ಕರೆಸಿದರು, ಅವರ ಮುಂದೆ ತಮ್ಮ ಅಹವಾಲನ್ನು ಮುಂದಿಟ್ಟರು. ನಾವು ನಂಬಿದ ಭೂತಗಳ ಸಮೇತ ನಮ್ಮನ್ನು ಮತಾಂತರ ಮಾಡಿದರೆ ನಾವೆಲ್ಲರೂ ಕ್ರೈಸ್ತರಾಗುತ್ತೇವೆ. ನಮ್ಮನ್ನು ಸ್ವೀಕರಿಸಬೇಕು ಎಂದು ವಿನಂತಿಸಿದರಂತೆ. ಹಳೆಯದನ್ನು ಬಿಡುವ ಧೈರ್ಯವಿಲ್ಲ. ಹೊಸತನ್ನು ಸ್ವೀಕರಿಸುವ ಉತ್ಸಾಹವಿದೆ. ಆದರೆ ಮಿಶನರಿಗಳು ಬಿಲ್ಲವರ ಈ ಬೇಡಿಕೆಯನ್ನು ತಳ್ಳಿ ಹಾಕಿದರಂತೆ, ಒಂದು ವೇಳೆ ಮಿಶನರಿಗಳು “ನೀವು ಬನ್ನಿ ನಿಮ್ಮ ಭೂತಗಳಿಗೆ ನಾವು ಒಂದು ಗತಿ ಕಾಣಿಸುತ್ತೇವೆ” ಎಂದು ಹೇಳುತ್ತಿದ್ದರೆ ತುಳು ನಾಡಿನಲ್ಲಿ ಬಿಲ್ಲವರು ಈಗ ಇರುವಷ್ಟು ಸಂಖ್ಯೆಯಲ್ಲಿ ಖಂಡಿತಾ ಇರುತ್ತಿರಲಿಲ್ಲ ಎನ್ನುವುದು ಸತ್ಯ. ಬಿಲ್ಲವರ ಬೋಳೇತನವನ್ನು ದುರುಪಯೋಗ ಪಡಿಸಿಕೊಳ್ಳುವ ಮಿಶನರಿಗಳು ಪ್ರಶಂಸನೀಯರು ಅಲ್ಲವೇ?

ಕೃಷಿ ಮತ್ತು ಗುಡಿ ಕೈಗಾರಿಕೆಗಳನ್ನು ಬಿಟ್ಟರೆ ಬೇರೆ ಉದ್ಯೋಗವೇ ಇಲ್ಲದ ಈ ನಾಡಿನಲ್ಲಿ ಹಂಚಿನ ಕಾರ್ಖಾನೆ, ಬಟ್ಟೆಯ ಕಾರ್ಖಾನೆ, ಮುದ್ರಣ ಕಾರ್ಖಾನೆಗಳನ್ನು ಸ್ಥಾಪಿಸಿ ಮಹಿಳೆಯರೂ ಗಂಡಸರಂತೆ ಹೊರ ದುಡಿಮೆ ಮಾಡಬಹುದು ಎಂದು ಮೊತ್ತಮೊದಲು ತೋರಿಸಿಕೊಟ್ಟವರು ಈ ಮಿಶನರಿಗಳು. ಖಾಕಿ ಬಣ್ಣವನ್ನು ಕಂಡುಹಿಡಿದು ಖಾಕಿ ಬಟ್ಟೆಯನ್ನು ಮೊತ್ತಮೊದಲು ತಯಾರು ಮಾಡಿದ ಕೀರ್ತಿ ಮಂಗಳೂರಿನ ನೇಯ್ಗೆ ಕಾರ್ಖಾನೆಗೆ ಸಲ್ಲುತ್ತದೆ. ಜೋನ್ ಹೇಲರ್ ಎಂಬವನು ಈ ಬಣ್ಣವನ್ನು ಕಂಡುಹಿಡಿದನಂತೆ , ಈ ವಸ್ತ್ರವು ಮುಂದೆ ಬ್ರಿಟಿಷ್ ಸೈನಿಕರಿಗೆ, ಪೊಲೀಸರಿಗೆ  ಪ್ರಪಂಚದಾದ್ಯಂತ ಸಮವಸ್ತ್ರವಾಗಿ ಖ್ಯಾತಿ ಗಳಿಸಿತು. ಮೊನ್ನೆ ಮೊನ್ನೆಯವರೆಗೂ ಶಾಲೆಯಲ್ಲಿ ಗಂಡು ಮಕ್ಕಳಿಗೆ ಸಮವಸ್ತ್ರವಾಗಿಯೂ ಉಪಯೋಗವಾಗುತ್ತಿತ್ತು. ಖಾಕಿ ಲೋಕ ವಿಖ್ಯಾತವಾದುದು ಮಂಗಳೂರಿನ ನೇಯ್ಗೆ ಕಾರ್ಖಾನೆಯಿಂದ. ಇಲ್ಲಿ ಹೆಚ್ಚಿನವರು ಬಿಲ್ಲವರು ನೇಕಾರರಾಗಿದ್ದರು ಎಂಬುದು ಗಮನಾರ್ಹ.

ಒಮ್ಮೆ ಮಂಗಳೂರಿನ ಸ್ಥಿತಿವಂತ ಬಿಲ್ಲವ ಬಂಧುಗಳು ಗೋಕರ್ಣಕ್ಕೆ ತಮ್ಮ ಹಿರಿಯರ ಪಿಂಡ ಪ್ರದಾನ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿನ ಬ್ರಾಹ್ಮಣರಿಂದ ಪೂಜೆ ಮಾಡಿಸಿಕೊಂಡು ನಿಶ್ಚಿಂತೆಯಿಂದ ಮರಳಿದರು. ಈ ಬಿಲ್ಲವ ಬಂಧುಗಳ ಮೈ ಬಣ್ಣ ಮತ್ತು ಸಂಸ್ಕಾರ ನೋಡಿ ಅಲ್ಲಿನ ಬ್ರಾಹ್ಮಣರು ಬೆಸ್ತು ಬಿದ್ದುದು ಮಾತ್ರವಲ್ಲ ಚೆನ್ನಾಗಿ ಸೇವೆ ಮಾಡಿದರು. ಕೆಲ ಸಮಯದ ಬಳಿಕ ಅವರು ಬಿಲ್ಲವರೆಂದು ಗೊತ್ತಾಗಿ ಹೋಯಿತು. ಇದರಿಂದ ಕೆರಳಿದ ಬ್ರಾಹ್ಮಣರು ಈ ಬಿಲ್ಲವ ಬಂಧುಗಳಿಗೆ ಪ್ರಾಯಶ್ಚಿತ್ತದ ದಂಡ ವಿಧಿಸಲು ಮುಂದಾದಾಗ ಇವರು ಕೇರಳಕ್ಕೆ ಹೋಗಿ ಬ್ರಹ್ಮಶ್ರೀ ನಾರಾಯಣಗುರುವರ್ಯರನ್ನು ಬೇಟಿಯಾದರು. ಇವರ ಬೋಳೇತನಕ್ಕೆ ನಿಯಂತ್ರಣ ಹಾಕಿದ್ದು ಬ್ರಹ್ಮಶ್ರೀ ನಾರಾಯಣಗುರು ವರ್ಯರು ನೀಡಿದ ಉಪದೇಶಗಳು. ಸುಲಿಗೆಗೆ ಒಡ್ಡಿಕೊಳ್ಳುವವರಿದ್ದಾಗ ಧರ್ಮದ ಹೆಸರಿನಲ್ಲಿ ಸುಲಿಗೆ ಮಾಡುವವರೂ ಇರುತ್ತಾರೆ ಎಂಬ ಸತ್ಯ ಶ್ರೀ ಗುರುಗಳ ಉಪದೇಶಗಳಿಂದ ಅರಿವಾಯಿತು. ಆ ಬಳಿಕ ಇವರ ವಿನಂತಿಯಂತೆ ಶ್ರೀ ಗುರುಗಳು ಮಂಗಳೂರಿಗೆ ಬಂದು ಕುದ್ರೋಳಿಯಲ್ಲಿ ಸ್ಥಳ ಗುರುತಿಸಿ ದೇವಸ್ಥಾನ ನಿರ್ಮಿಸಲು ಪ್ರೇರಣೆ ನೀಡಿದ್ದಲ್ಲದೆ, ದೇವಸ್ಥಾನ ನಿರ್ಮಾಣವಾಗಿ ಪ್ರತಿಷ್ಠೆಯನ್ನೂ ಮಾಡಿ ಶ್ರೀ ಗೋಕರ್ಣನಾಥೇಶ್ವರ ಎಂಬ ಹೆಸರು ಪ್ರಸಿದ್ಧಿಯಾಗಲು ಮೂಲ ಕಾರಣವಾದ ಘಟನೆಯಿದು. ಆದರೆ ಬಹಳ ಸೋಜಿಗದ ಸಂಗತಿಯೆಂದರೆ ಈಗಲೂ ತಮ್ಮನ್ನು ತಾವೇ ಸುಲಿಗೆಗೆ ಒಡ್ಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಭಕ್ತಿಯ ಪ್ರದರ್ಶನವೇ? ಆರ್ಥಿಕ ಸಂಪನ್ನತೆಯೇ? ಎಂಬ ಗೊಂದಲ ನನಗಿದೆ.

“ಬಿರುವೆರ್ ಕೆರುವೆರ್” ಎಂಬ ಸ್ಲೋಗನ್ ಅಪವ್ಯಾಖ್ಯಾನಗೊಳ್ಳುವುದಕ್ಕೂ ಬಿಲ್ಲವರ ಅಸ್ಮಿತೆಯೇ ಕಾರಣ. ಪರಮಕ್ರೂರಿಗಳನ್ನು, ಅಧರ್ಮಿಗಳನ್ನು ಕೊಲ್ಲಲು ಹೇಸುವುದಿಲ್ಲ ಎಂದು ಸ್ವ ಸಮರ್ಥನೆಗೆ ಸ್ಲೋಗನ್ ಬಳಕೆಯಾಗಿದೆ. ಹಾಗೆಯೇ ಅವರು ಕೊಲ್ಲಲಿಕ್ಕಾಗಿಯೇ ಇರುವವರು ಎಂಬ ಮಿಥ್ಯೆಯೂ ಪ್ರಚಾರದಲ್ಲಿದೆ. ಕೊಲ್ಲಲು ಸಿದ್ದರಾದವರಿಗೆ ಪೆಟ್ಟು ತಿನ್ನಲೂ ಗೊತ್ತಿದೆ ಎಂಬುದು ಅಘೋಷಿತ ನಿಯಮ. ಹಾಗಾಗಿ ಮುಂದಾಳುಗಳು ಕಾಲಾಳುಗಳಾಗಿ ವೀರಯೋಧರಂತೆ ತಮ್ಮನ್ನು ತಾವು ವಿಜೃಂಬಿಸಿಕೊಂಡು ಮೆರೆಯುವುದು ಕೂಡಾ ಬಿಲ್ಲವರ ವಿಶೇಷ ಗುಣವಾಗಿದೆ. ಈ ಎಲ್ಲಾ ಪೆದ್ದುತನಗಳಿದ್ದರೂ ಮೆಚ್ಚಲೇಬೇಕಾದ ಹಲವು ಒಳ್ಳೆಯತನಗಳೂ ಇವೆ. ತಮಗೆ ವಹಿಸಿಕೊಟ್ಟ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅಚ್ಚುಕಟ್ಟಾಗಿ ಪೂರೈಸುವಾಗ ಆವೇಶ ಬಂದಂತೆ ಕೆಲಸ ಮಾಡುವ ಏಕಾಗ್ರತೆಯೂ ಇದೆ. ಒಳ್ಳೆಯ ಕೆಲಸವನ್ನು ಮಾಡುವಾಗ ಈ ಆವೇಶವಿರುವ ಅಸ್ಮಿತೆಯುಳ್ಳ ಯುವಕರ ಸಂಖ್ಯೆ ಹೆಚ್ಚಲಿ ಎಂದು ನನ್ನ ಹಾರೈಕೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!