ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು

ಶಿವಗಿರಿ ಕ್ಷೇತ್ರ ದರ್ಶನ

ಮಂಗಳೂರು: ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಪೂರ್ಣ ಜೀವನಾಮೃತ ಸಾರವನ್ನು ಯಾತ್ರಾರ್ಥಿಗಳಿಗೆ ಉಣಬಡಿಸಿದ ಯುವವಾಹಿನಿ(ರಿ.) ಮಂಗಳೂರು ಘಟಕದ ಮಾಜಿ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರ ಪೂಜಾರಿಯವರ ಅನುಭವದ ಮೂಸೆಯಿಂದ ಸುಜಲ ಧಾರೆಯಂತೆ ಹರಿದ ಸುಲಲಿತ ವಿಚಾರಧಾರೆ. ಮರುತ್ವ ಮಲೆಯನ್ನು ಹತ್ತಿ ಇಳಿದು ಅವರ್ಣನೀಯ ಆನಂದವನ್ನು ಪಡೆದ ಯುವವಾಹಿನಿ ಬಂಧುಗಳು.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಾರ್ವಕಾಲಿಕ ಸತ್ಯವನ್ನು ಈ ಜಗತ್ತಿಗೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಪರಮ ಪವಿತ್ರವಾದ ಕರ್ಮಭೂಮಿ ಶಿವಗಿರಿ ಕ್ಷೇತ್ರಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವುದು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಪೂಜಾರಿಯವರ ಮನದಲ್ಲಿ ಚಿಗುರೊಡೆದ ಬಹುದಿನಗಳ ಕನಸಾಗಿತ್ತು. ಈ ಕನಸಿಗೆ ನೀರೆರೆದು ಪೋಷಿಸಲು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಶ್ರೀ ಮೋಹನ್ ಮಾಡೂರು ಹಾಗೂ ಪದಾಧಿಕಾರಿಗಳ ದಂಡು ಅದಾಗಲೇ ಸಂಪೂರ್ಣವಾಗಿ ಸಜ್ಜಾಗಿ ನಿಂತಿತ್ತು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಪೂರ್ಣ ಜೀವನ ಚರಿತ್ರೆಯನ್ನು ಮನನ ಮಾಡಿಕೊಂಡು, ಶಿವಗಿರಿ ಕ್ಷೇತ್ರದ ಮಹಿಮೆಯ ಅಂಗುಲ ಅಂಗುಲವನ್ನು ತನ್ನ ಅಪಾರ ಅನುಭವದಿಂದ ಅರೆದು ಅಘ್ರಾಣಿಸಿದ ಯುವವಾಹಿನಿ(ರಿ.) ಮಂಗಳೂರು ಘಟಕದ ಮಾಜಿ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರ ಪೂಜಾರಿಯವರ ಮಾರ್ಗದರ್ಶನದ ಸೌಭಾಗ್ಯ ಒದಗಿ ಬಂದದ್ದು ಯಾತ್ರೆಯ ಯಶಸ್ವಿಗೆ ಮತ್ತಷ್ಟು ಪುಷ್ಟಿ ಕೊಟ್ಟಿತು. ಸುಮಾರು ಎರಡು ತಿಂಗಳಿನಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಯುವವಾಹಿನಿ ಬಂಧುಗಳ ಕಾತರಕ್ಕೆ ಹಸಿರು ನಿಶಾನೆಯ ಕ್ಷಣಗಣನೆ ಕೊನೆಗೂ ಬಂದೇ ಬಿಟ್ಟಿತು.

ದಿನಾಂಕ 06.04.2024 ನೇ ಶನಿವಾರ ಸಂಜೆ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ವಿವಿಧ ಘಟಕಗಳ ಸದಸ್ಯರುಗಳು, ಯುವವಾಹಿನಿ ಬಂಧುಗಳು ಶಿವಗಿರಿ ಕ್ಷೇತ್ರ ದರ್ಶನಕ್ಕೆ ಅಣಿಯಾಗಿ ನಿಂತರು. ಮೂಡಣದಿ ಲೋಕ ವ್ಯಾಪಿ ಸಂಚಾರ ಮಾಡಿದ ಬಾನ ಭಾಸ್ಕರ ತನ್ನ ನಿತ್ಯ ಕಾಯಕವನ್ನು ಮುಗಿಸಿ ಪಡುವಣದಿ ವಿಶ್ರಮಿಸುವ ಆ ಹೊತ್ತು ಅರಿವಿನ ಯಾತ್ರೆ ಶಿವಗಿರಿ ಕ್ಷೇತ್ರ ದರ್ಶನಕ್ಕೆ ಮುನ್ನುಡಿಯನ್ನು ಬರೆಯಿತು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರ ಮುಂದಾಳತ್ವದಲ್ಲಿ ಸುಮಾರು 55 ಯಾತ್ರಾರ್ಥಿಗಳ ತಂಡ ಸಂಜೆ 6.00 ಗಂಟೆಗೆ ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ರೈಲು ಬಂಡಿಯಲ್ಲಿ ತನ್ನ ಪ್ರಯಾಣ ಆರಂಭಿಸಿತು. ರಾತ್ರಿಯ ಉಪಹಾರವನ್ನು ರೈಲುಬಂಡಿಯಲ್ಲೆ ಮುಗಿಸಿದ ನಂತರ ಸಿಹಿನಿದ್ರೆಗೆ ಜಾರಿದ ಯುವವಾಹಿನಿ ಬಂಧುಗಳು, ಮುಂಜಾನೆ ಗಂಟೆ 5.40 ಕ್ಕೆ ಶಿವಗಿರಿಯ ವರ್ಕಳ ರೈಲು ನಿಲ್ದಾಣ ತಲುಪುತ್ತಿದ್ದಂತೆ ವಾಸ್ತವಕ್ಕೆ ಮರಳಿದರು.

ಪೂರ್ವನಿಗದಿಯಂತೆ, ವರ್ಕಳ ನಿಲ್ದಾಣದಿಂದ ಶಿವಗಿರಿಯ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಕೊಂಡೊಯ್ಯಲು ಸುವ್ಯವಸ್ಥಿತ ಬಸ್ಸು ರೈಲು ನಿಲ್ದಾಣದ ಪಕ್ಕದಲ್ಲೆ ಕಾಯುತ್ತಿತ್ತು. ಬಸ್ಸಿನಲ್ಲಿ ಒಂದಷ್ಟು ದೂರ ಕ್ರಮಿಸಿದ ನಂತರ ಶಿವಗಿರಿ ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಬಂದಿಳಿಸಿತು. ಪರಮ ಪವಿತ್ರವಾದ ಶಿವಗಿರಿ ಕ್ಷೇತ್ರದ ಮಣ್ಣಿನಲ್ಲಿ ನಮ್ಮೆಲ್ಲರ ಪಾದಸ್ಪರ್ಶವಾದಾಗ ಒಂದು ರೀತಿಯ ಅವ್ಯಕ್ತ, ಅವರ್ಣನೀಯ ಅನುಭವವಾದಂತೆ ಭಾಸವಾಯ್ತು. ಮಾರ್ಗದರ್ಶಕರ ಸಲಹೆ ಸೂಚನೆ ಮಾರ್ಗದರ್ಶನದಂತೆ ನಾವೆಲ್ಲರೂ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು ಯಾತ್ರೆಯ ಮೊತ್ತ ಮೊದಲ ಸ್ಥಳ ಶಾರದಾ ಪೀಠದ ವೀಕ್ಷಣೆಗೆ ಹಾತೊರೆಯುತ್ತಿದ್ದೆವು.

ಸಾಮಾನ್ಯವಾಗಿ ಶಾರದೆಯು ನವಿಲನ್ನು ವಾಹನವನ್ನಾಗಿಸಿ, ವೀಣೆಯನ್ನು ಹಿಡಿದುಕೊಂಡಿದ್ದರೆ ಶಿವಗಿರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಶಾರದೆಯು ತಾವರೆಯಲ್ಲಿ ಕುಳಿತಿದ್ದು, ನಾಲ್ಕು ಕೈಗಳನ್ನು ಹೊಂದಿಕೊಂಡು ಪುಸ್ತಕ, ಕುಂಭ , ಗಿಳಿ ಮತ್ತು ಚಿನ್ಮುದ್ರೆಯೊಂದಿಗೆ ಸರ್ವ ಜಾತಿ ಧರ್ಮದವರಿಗೂ ಅನ್ವಯಿಸುವ ಶಾರದೆಯಾಗಿ ಭಿನ್ನವಾಗಿ ವಿಭಿನ್ನವಾಗಿ ಕಂಗೊಳಿಸುತ್ತಿತ್ತು. ಅಲ್ಲಿಂದ ಮುಂದೆ ಕ್ಷೇತ್ರದ ಎಡಭಾಗದಲ್ಲಿರುವ ಪ್ರಾಂಜಲವಾದ ನಂದಿ ಮೂರ್ತಿಗೆ ನಮಸ್ಕರಿಸಿ, ಬ್ರಹ್ಮಶ್ರೀ ನಾರಾಯಣ ಗುರುಗಳು ತನ್ನ ಅಂತಿಮ ದಿನಗಳನ್ನು ಕಳೆದ ಕೊಠಡಿಯ ವೀಕ್ಷಣೆಗೈದು, ಅವರು ಉಪಯೋಗಿಸುತ್ತಿದ್ದ ಆಸನ, ವಿಶ್ರಮಿಸುತ್ತಿದ್ದ ಮಂಚವನ್ನು ನೋಡಿ ಸಂತುಷ್ಟರಾದೆವು. ಮುಂದೆ ಗುರುಗಳ ಪರಮಶಿಷ್ಯರಾದ ಭೋಧಾನಂದ ಸ್ವಾಮಿಗಳ ಸಮಾಧಿ ಸ್ಥಳವನ್ನು ವೀಕ್ಷಿಸಿ, ಬ್ರಹ್ಮಶ್ರೀ ನಾರಾಯಣ ಗುರುಗಳ ರಿಕ್ಷಾ ಮಂಟಪವನ್ನು ವೀಕ್ಷಿಸಿ, ಅಲ್ಲೇ ಅನತಿ ದೂರದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವರ ಇಚ್ಛೆಯಂತೆ ಸಮಾಧಿ ಕಟ್ಟಿಸಿದ ಸ್ಥಳವನ್ನು ವೀಕ್ಷಿಸಿದೆವು. ಸಮಾಧಿ ಸ್ಥಳದಲ್ಲಿರುವ ಗುರುಗಳ ಶಾಂತ ಮುಖಭಾವದ ಮೂರ್ತಿಯನ್ನು ಕಂಡಾಗ ಜಗತ್ತನ್ನೇ ಗೆದ್ದ ಬುದ್ಧನಂತೆ ದೀಪಿಕಾಂಕುರ ದೀಪ್ತಿಯಂತಹ ತೇಜಸ್ಸು, ಓಜಸ್ಸು ಸುತ್ತಲೂ ಪ್ರಜ್ವಲಿಸಿದಂತೆ ಸ್ವಾನುಭಾವ ಉಂಟಾಗುತ್ತಿತ್ತು. ಅಲ್ಲೇ ಪಕ್ಕದಲ್ಲಿದ್ದ ಗತಕಾಲದ ಹಲಸಿನ ಮರ ಗುರುಗಳ ಮಹಿಮೆಯ ದ್ಯೋತಕದ ಹೆಗ್ಗುರುತಾಗಿ ಈಗಲೂ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ತದನಂತರ ಹೋಮ ಹವನಗಳನ್ನು ನಡೆಸುವ ವೈದಿಕದತ್ತ ನಮ್ಮೆಲ್ಲರ ಚಿತ್ತ ಕೇಂದ್ರೀಕೃತವಾದ ನಂತರ ಮುಂದಿನ ನಡೆ ಗುರುಕುಲ ಮತ್ತು ನಟರಾಜ ಗುರುಗಳ ಸಮಾಧಿಯತ್ತ ಚಲಿಸಿತು.

ನಟರಾಜರ ಸಮಾಧಿಯನ್ನು ವೀಕ್ಷಿಸಿದ ನಂತರ ಮಠದಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿಕೊಂಡು, ಮುಂದಿನ ನಮ್ಮ ನಡೆ ಹತ್ತಿರದಲ್ಲಿದ್ದ ಗುರುಕುಲದತ್ತ ಸಾಗಿತು. ಗುರುಕುಲದಲ್ಲಿದ್ದ ಪ್ರಶಾಂತ ವದನದ ಸ್ವಾಮಿಗಳು ನಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ ಗುರುಕುಲದ ಐತಿಹ್ಯದ ಮೆಲುಕನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಸ್ಕೃತದಲ್ಲಿ ರಚಿಸಿರುವ ಗ್ರಂಥಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿರುವ, ಅದರಲ್ಲೂ ವಿಶೇಷವಾಗಿ ಸೌಂದರ್ಯ ಲಹರಿಯನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ನಟರಾಜ ಗುರುಗಳ ಅಪರಿಮಿತ ಪಾಂಡಿತ್ಯದ ಪರಿಚಯವನ್ನು ನೀಡಿದರು. ಇದೇ ಸಂದರ್ಭದಲ್ಲಿ ಗುರುಕುಲದೊಳಗೆ ತೇಜೋಮಯವಾಗಿ ಪ್ರಕಾಶಿಸುತ್ತಿದ್ದ ಶ್ರೀ ಚಕ್ರದ ಮಹತ್ವವನ್ನು ಸ್ವಾಮಿಗಳು ಅರುಹಿದರು. ಸುತ್ತಲೂ ಜೋಡಿಸಿಟ್ಟ ವಿವಿಧ ಭಾಷೆಗಳ ಗ್ರಂಥಗಳನ್ನು ಕಂಡಾಗ ಸಾಹಿತ್ಯ ಸರಸ್ವತಿಯ ಮಡಿಲಲ್ಲಿ ಮಿಂದೆದ್ದು ಬಂದ ಅನುಭವವಾಯ್ತು. ಸ್ವಾಮಿಗಳಿಂದ ಆಶೀರ್ವಾದ ಪಡೆದ ಯುವವಾಹಿನಿ ಬಂಧುಗಳು ಮುಂದೆ ಆದಮ್ಯ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಚೆಂಬಳಾಂತಿ ಜಾಗಕ್ಕೆ ಮುಂದಡಿಯಿಟ್ಟರು.

ಚೆಂಬಳಾತಿಯಲ್ಲಿ ಮಣಕ್ಕಲ್ ಭಗವತಿಯ ದರ್ಶನಗೈದು, ತಂದೆ ಮಾದನ್ ಆಶನ್ ಮತ್ತು ತಾಯಿ ಕುಟ್ಟಿ ಅಮ್ಮಾಳ್ ರವರ ಪವಿತ್ರ ಗರ್ಭದಿಂದ ದೇದಿಪ್ಯಮಾನವಾದ ಶಕ್ತಿಯೊಂದು ಈ ಭೂಮಿಯಲ್ಲಿ ಉದಯಿಸಿದ ಸ್ಥಳಕ್ಕೆ ಕಾಲಿಡುತ್ತಿದ್ದಂತೆ, ಎಲ್ಲರಲ್ಲೂ ನವಿರಾದ ಮಿಂಚಿನ ಸಂಚಾರವಾದಂತೆ ಭಾಸವಾಯ್ತು. ಚೆಂಬಳಾತಿಯಲ್ಲಿ ಗುರುಗಳು ಜನಿಸಿ ಅದೆಷ್ಟು ದಶಕಗಳೆ ಕಳೆದರೂ ಇಂದಿಗೂ ಅಲ್ಲಿರುವ ತೆಂಗಿನ ಸೋಗೆಯಿಂದ ಆವೃತವಾಗಿರುವ ಸೆಗಣಿ ಸಾರಿಸಿದ ಪ್ರಸೂತಿ ಗೃಹ ತನ್ನ ಮೂಲ ಸ್ವರೂಪವನ್ನು ಕಾಯ್ದುಕೊಂಡು , ದಿವ್ಯ ಜ್ಞಾನಿಯ ತೇಜೋಮಯ ಮೂರ್ತಿಯಿಂದ ಅಪಾರ ಭಕ್ತಾದಿಗಳನ್ನು ಈಗಲೂ ತನ್ನತ್ತ ಸೆಳೆಯುತ್ತಿದೆ. ಪಕ್ಕದಲ್ಲಿ ಇದ್ದ ಗಣಪತಿ ಗುಡಿ ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಇರುವ ಮಂದಿರದ ದರ್ಶನ ಪಡೆದು, ವಯಲ್ ವಾರ್ ಮನೆತನದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಳದಿಂದ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಮುಂದೆ ಸಾಗಲೇಬೇಕಾಯಿತು.

ಪ್ರತಿಯೊಂದು ಸ್ಥಳವನ್ನು ಸಂದರ್ಶಿಸಿದ ನಂತರ, ಆ ಸ್ಥಳದ ಮಹತ್ವವನ್ನು ಗುರುಗಳ ಮಹಿಮೆಯನ್ನು ನಿರರ್ಗಳವಾಗಿ, ಸುಲಲಿತವಾಗಿ ನಮ್ಮೆದುರು ಬಿಚ್ಚಿಡುತ್ತಿದ್ದ ನಮ್ಮ ಮಾರ್ಗದರ್ಶಕರಾದ ಹಿರಿಯ ಚೇತನ ಶ್ರೀ ರಾಮಚಂದ್ರ ಪೂಜಾರಿಯವರ ನೆನಪಿನ ಪ್ರೌಢಿಮೆ ನಮ್ಮೆಲ್ಲರನ್ನೂ ಮೂಕವಿಸ್ಮಿತಗೊಳಿಸುತ್ತಿತ್ತು.

ಮುಂದಕ್ಕೆ ಕುನ್ನುಂಪಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟ ನಮ್ಮ ತಂಡ, ಅಲ್ಲಿನ ಸ್ಥಳದ ವಿಶೇಷತೆಯನ್ನು, ಪವಾಡವನ್ನು ಮಾರ್ಗದರ್ಶಕರಿಂದ ತಿಳಿದುಕೊಂಡು ಸರ್ವರ ಪರವಾಗಿ ಪೂಜೆಯನ್ನು ಸಲ್ಲಿಸಲಾಯಿತು. ಪೂಜೆಯ ನಂತರ ಸಭಾಂಗಣದಲ್ಲಿ ಮಧ್ಯಾಹ್ನದ ಭೋಜನವನ್ನು ಸವಿಯಲಾಯಿತು. ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ ಮತ್ತೆ ಓಡಾಟ. ಮುಂದೆ ಬ್ರಹ್ಮಶ್ರೀ ನಾರಾಯಣಗುರುಗಳು ಮೊತ್ತ ಮೊದಲು ಪ್ರತಿಷ್ಠಾಪಿಸಿದ ಶಿವಲಿಂಗ ಅರವೀಪುರಂ ಮಂದಿರಕ್ಕೆ ನಮ್ಮ ಕಾಲುಗಳು ಹೆಜ್ಜೆಯೂರತೊಡಗಿದವು. ಒಂದೆಡೆ ಅಂದಿನ ಕಾಲದಲ್ಲಿ ಋಷಿಮುನಿಗಳು ತಪ್ಪಸ್ಸು ಗೈದಿರುವ ಬೆಟ್ಟಗುಡ್ಡಗಳ ಸಾಲು. ಮತ್ತೊಂದೆಡೆ ಪ್ರಕೃತಿ ರಮಣೀಯ ಹಚ್ಚ ಹಸಿರಿನ ವನಸಿರಿಯ ಮಧ್ಯೆ ಪ್ರಶಾಂತವಾಗಿ ಹರಿಯುವ ನದಿ ನೆಯ್ಯರ್ ನದಿ ಕಿನಾರೆ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ನಮ್ಮಲ್ಲಿ ಒಂದಷ್ಟು ಬಂಧುಗಳು ನೆಯ್ಯರ್ ನದಿ ಕಿನಾರೆಯಲ್ಲಿ ನೀರಾಟವಾಡಿ ಮನತಣಿಸಿದರು. ಕೆಳ ವರ್ಗದವರಿಗೆ ದೇಗುಲ ಪ್ರವೇಶ ನಿಷೇಧವಾಗಿದ್ದ ಅಂದಿನ ಕಾಲಘಟ್ಟದಲ್ಲಿ ಶೂದ್ರರಿಗಾಗಿ ಶೂದ್ರ ಶಿವಲಿಂಗವನ್ನು ಇದೇ ನೆಯ್ಯರ್ ನದಿ ಕಿನಾರೆಯ ಶಂಕರಕೊಳದಲ್ಲಿ ಮುಳುಗಿ ಸ್ವಲ್ಪ ಸಮಯ ಕಣ್ಮರೆಯಾಗಿ ಶಿವಲಿಂಗದೊಂದಿಗೆ ಎದ್ದು ಬಂದ ನಾರಾಯಣ ಗುರುಗಳು ಇಲ್ಲಿ ಮೊತ್ತ ಮೊದಲ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ ಮಂದಿರವನ್ನು ನೋಡಿ ನಾವೆಲ್ಲರೂ ಪುನೀತರಾದೆವು, ವಿನೀತರಾದೆವು. ಅಂದಿಗೂ, ಇಂದಿಗೂ, ಮುಂದೆಯೂ ಎಂದೆಂದಿಗೂ ಗುರುಗಳು ಪ್ರತಿಷ್ಠಾಪಿಸಿದ ಆ ಸಣ್ಣ ಗಾತ್ರದ ಶಿವಲಿಂಗವನ್ನು ಯಾವ ಶಕ್ತಿಯಿಂದಲೂ ಬೇರ್ಪಡಿಸಲಾಗದು ಎನ್ನುವ ವಿಷಯವನ್ನು ತಿಳಿದು ನಾವೆಲ್ಲರೂ ಗುರುಗಳ ಅಂತ:ಶಕ್ತಿಗೆ ಅರೆಕ್ಷಣ ಸ್ತಂಭಿಭೂತರಾದೆವು. ನಂತರ ಅಲ್ಲಿರುವ ವಿಶಾಲವಾದ ಕೊಠಡಿಯಲ್ಲಿ ಸಂಜೆಯ ಉಪಹಾರವನ್ನು ಸೇವಿಸೆದೆವು. ಈ ಕೊಠಡಿಯು ಅಂದು ಸಂಸ್ಕೃತ ಕಲಿಸುವ ಪಾಠಶಾಲೆಯಾಗಿತ್ತು ಎನ್ನುವುದು ನಂಬಲೇಬೇಕಾದ ಕಹಿಸತ್ಯವಾಗಿತ್ತು.

ಅರವೀಪುರಂ ಕ್ಷೇತ್ರ ದರ್ಶನದ ನಂತರ ನಾವು ಮುಸ್ಸಂಜೆಯಲ್ಲಿ ಕನ್ಯಾಕುಮಾರಿ ದರುಶನಕ್ಕೆ ಹೊರಟೆವು. ರಮಣೀಯವಾದ ಕಡಲ ತಡಿಯಲ್ಲಿ ಕಣ್ಣು ಕೋರೈಸುವ ವಜ್ರದ ನಾಸಿಕದ ನತ್ತಿನಲ್ಲಿ ಪ್ರಕಾಶಿಸುತ್ತಿದ್ದ ಕನ್ಯಾಕುಮಾರಿಯ ಭಗವತಿ ಅಮ್ಮನ ದರುಶನವನ್ನು ಪಡೆದು ಧನ್ಯರಾದೆವು. ಸೂರ್ಯಾಸ್ತವಾಗುತ್ತಿದ್ದಂತೆ ಆ ದಿನದ ಯಾತ್ರೆಗೆ ಪೂರ್ಣ ವಿರಾಮ ನೀಡಿ ಗುರುಗಳ ಆಶ್ರಮದಲ್ಲಿ ವಿಶ್ರಮಿಸಿದೆವು. ದಿನವಿಡೀ ಸುತ್ತಾಡಿ ದಣಿದಿದ್ದ ದೇಹಕ್ಕೆ ಜಳಕದ ಅಭಿಷೇಕ ಮಾಡಿ ರಾತ್ರಿಯಲ್ಲಿ ಸಂತೋಷದಿಂದ ಸಹಭೋಜನ ನಡೆಸಿದೆವು. ದೈವೇಚ್ಛೆಯೂ, ನಮ್ಮ ಪುಣ್ಯವೊ ಏನೋ ಎಂಬಂತೆ ಆಶ್ರಮದ ಪಕ್ಕದ ರಸ್ತೆಯಲ್ಲೆ ನಡೆಯುತ್ತಿದ್ದ ತಮಿಳು ಸಮುದಾಯದ ನಾರಾಯಣ ಸ್ವಾಮಿ ದೇವರ ವಿಶಿಷ್ಟ ರೀತಿಯ ಮೆರವಣಿಗೆ ನೋಡುವ ಸೌಭಾಗ್ಯ ನಮಗೆ ಒದಗಿ ಬಂದಿತ್ತು. ಅದರ ನಂತರ ಒಬ್ಬೊಬ್ಬರು ನಿದ್ರಾದೇವಿಯ ಮಡಿಲಿಗೆ ನಿಧಾನವಾಗಿ ಜಾರಿಕೊಂಡರು.

ದಿನಾಂಕ: 08.04.2024 ಸೋಮವಾರ, ನೀರವ ರಾತ್ರಿಯಲ್ಲಿ ಹಸಿರನ್ನು ಹೊದ್ದು ಮೌನವಾಗಿ ಮಲಗಿದ್ದ ಧರಣಿದೇವಿಗೆ ಮುಂಜಾನೆಯ ದಿನಮಣಿಯ ಹೊಂಗಿರಣ ಮುತ್ತಿಕ್ಕುತ್ತಿದ್ದಂತೆ ಪ್ರಕೃತಿಯಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನ ನಮ್ಮನ್ನು ಎರಡನೆಯ ದಿವಸದ ಯಾತ್ರೆಯ ಆರಂಭಕ್ಕೆ ಸಜ್ಜಾಗುವಂತೆ ಸ್ವಾಗತ ಕೋರಿತು. ಮುಂಜಾನೆಯ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು ಶುಚಿರ್ಭೂತರಾಗಿ ಬೆಳಿಗ್ಗೆ 5.00 ಗಂಟೆಯಿಂದ 6.15 ರವರೆಗೆ ಆಶ್ರಮದಲ್ಲಿ ನಡೆಯುತ್ತಿರುವ ಸತ್ಸಂಗದಲ್ಲಿ ಪಾಲ್ಗೊಂಡು ಸುಂದರವಾದ ಆಧ್ಯಾತ್ಮ ಲೋಕದಲ್ಲಿ ವಿಹರಿಸಿದೆವು. ವಾಸ್ತವಕ್ಕೆ ಮರಳಿದ ನಂತರ ಮುಂದೆ, ಮರುತ್ವ ಮಲೆ ಬೆಟ್ಟದತ್ತ.

ಸಮುದ್ರ ಮಟ್ಟದಿಂದ ಸುಮಾರು ಎರಡು ಸಾವಿರ ಕಿಲೋಮೀಟರ್ ಎತ್ತರದಲ್ಲಿರುವ ಜನಸಾಮಾನ್ಯರಿಗೆ ನಿಜಬದುಕಿನ ಕಹಿ ಸತ್ಯವನ್ನು ತೆರೆದಿಟ್ಟ ಬ್ರಹ್ಮಶ್ರೀ ನಾರಾಯಣಗುರುಗಳು ಸುಮಾರು ಏಳು ವರ್ಷಗಳ ಕಾಲ ತಪಸ್ಸುಗೈದು ದಿವ್ಯ ಜ್ಞಾನವನ್ನು ಸಿದ್ಧಿಸಿದ ಮರುತ್ವಮಲೆ ಬೆಟ್ಟವನ್ನು ಏರಲು ಕ್ಷಣಗಣನೆ ಆರಂಭವಾಯಿತು. ಈ ಮೊದಲು ಬೆಟ್ಟ ಏರಿದವರು ಸ್ವಲ್ಪ ನಿರಾಂತಕವಾಗಿದ್ದರೆ, ಇದೇ ಮೊದಲ ಬಾರಿಗೆ ಬೆಟ್ಟ ಹತ್ತುವವರಲ್ಲಿ ಮನದ ಮೂಲೆಯಲ್ಲಿ ಒಂದು ರೀತಿಯ ವ್ಯಕ್ತಪಡಿಸಲಾಗದ ತೊಳಲಾಟ. ಸುಪ್ತ ಮನಸ್ಸಿನಲ್ಲಿ ಭಯ, ಹಿಂಜರಿಕೆ ಇದ್ದರೂ ಜಾಗೃತ ಮನಸ್ಸು ಬೆಟ್ಟ ಹತ್ತಲೇಬೇಕೆಂಬ ತುಡಿತವನ್ನು ಮಿಡಿತವನ್ನು ಮತ್ತಷ್ಟು ಜಾಗೃತಗೊಳಿಸುತ್ತಿತ್ತು.

ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಜೊತೆಯಾಗಿದ್ದ ನಮ್ಮ ತಂಡ ಮರುತ್ವ ಮಲೆಯ ಬೆಟ್ಟವನ್ನು ಹೊಸ ಹುರುಪಿನೊಂದಿಗೆ ಹತ್ತಲು ಆರಂಭಿಸಿತು. ಆರಂಭದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೆ ನಿರಾಂತಕವಾಗಿ ಸಾಗುತ್ತಿದ್ದ ನಮ್ಮ ಬಂಧುಗಳಲ್ಲಿ, ಕೆಲವು ಬಂಧುಗಳು ಮುಂದೆ ಮುಂದೆ ಸಾಗುತ್ತಿದ್ದಂತೆ ಕಲ್ಲು ಬಂಡೆಗಳ ದುರ್ಗಮ ಹಾದಿಯಲ್ಲಿ ಬಳಲಿ ಬಸವಳಿದರು. ಒಂದಿಬ್ಬರು ಹಿರಿಯರು ಬೆಟ್ಟ ಏರಲೇಬೇಕೆಂಬ ದೃಢ ಸಂಕಲ್ಪ ಮಾಡಿದ್ದರೂ ತೀರಾ ಬಳಲಿಕೆಯಿಂದ ಯಾನವನ್ನು ಅರ್ಧಕ್ಕೆ ಮೊಟಕುಗೊಳಿಸುವ ಅನಿವಾರ್ಯತೆಗೆ ಸಿಲುಕಿದರು. ಅವರನ್ನು ಬೀಳ್ಕೊಟ್ಟು ನಮ್ಮ ತಂಡ ಮುಂದೆ ಮುಂದೆ ಸಾಗತೊಡಗಿತು. ಒಂದಷ್ಟು ತಂಡವಾಗಿ ಬೆಟ್ಟ ಏರಿದ ನಮ್ಮ ತಂಡದಲ್ಲಿನ ಮೊದಲ ತಂಡಕ್ಕೆ ಬೆಟ್ಟದ ಮಧ್ಯೆ ಕೂಗಳತೆಯ ದೂರದಲ್ಲಿ ಕಾಡು ಕಡವೆ ಗೋಚರಿಸಿ ವಿಶಿಷ್ಟ ಅನುಭವವನ್ನು ನೀಡಿತು. ಸಕಲ ಕಷ್ಟಗಳನ್ನೂ ಗುರುಗಳ ಪಾದಕಮಲಕ್ಕೆ ಅರ್ಪಿಸಿ ಸರ್ವಸ್ವವೂ ನೀನೆ ಎನ್ನುವ ಮನೋಭಾವದಿಂದ ಬೆಟ್ಟ ಏರಿದಾಗ ಕಾಡು ಪ್ರಾಣಿಗಳು ಯಾವುದೇ ತೊಂದರೆ ನೀಡದು ಎನ್ನುವ ಮನೋಸಂಕಲ್ಪ ಭಕ್ತಾಧಿಗಳದ್ದು ಕ್ರಮಿಸಿದಷ್ಟು ಮುಗಿಯದ ಕಲ್ಲು ಬಂಡೆಗಳ, ಎತ್ತರ ತಗ್ಗುಗಳ ದುರ್ಗಮ ಹಾದಿ ನಮ್ಮೆಲ್ಲರ ಬದುಕಿಗೆ ಕಠಿಣ ಪರೀಕ್ಷೆ ಎಂದರೂ ತಪ್ಪಾಗಲಾರದು. ಜೀವನ ಎಂದರೆ ಕೇವಲ ಸುಖಕ್ಕಾಗಿ ಹಂಬಲಿಸುವುದು ಅಲ್ಲ. ಆ ಸುಖವನ್ನು ಪಡೆಯಲು ಯಾವ ರೀತಿ ಸಂಕಷ್ಟಗಳನ್ನು ಎದುರಿಸಿ ಧೈರ್ಯದಿಂದ ಮುನ್ನುಗ್ಗಬೇಕೆಂಬ ಪಾಠವನ್ನು ಗುರುಗಳ ಮರುತ್ವ ಮಲೆಯು ನಮ್ಮೆಲ್ಲರ ಮುಂದಿಟ್ಟು ಸರ್ವರ ಕಣ್ತೆರಿಸಿತು.

ಅಂತೂ ಇಂತೂ ಸುಮಾರು ಒಂದು ಗಂಟೆಯಲ್ಲಿ ಬೆಟ್ಟ ಏರಬಹುದಾದರೂ ನಮ್ಮ ತಂಡದಲ್ಲಿ ಕೆಲವರಿಗೆ ಹೊಸ ಅನುಭವ ಆಗಿದ್ದರಿಂದ ಒಂದಷ್ಟು ಸಮಯ ತಡವಾದರೂ ಛಲ ಬಿಡದ ತ್ರಿವಿಕ್ರಮನಂತೆ ಕೊನೆಗೂ ಬೆಟ್ಟದ ತುದಿಯನ್ನು ಏರಿ ನಿಂತು ಗೆಲುವಿನ ನಗೆಯನ್ನು ಬೀರಿದಾಗ ಜೀವನದಲ್ಲಿ ಹೊಸ ಸಾಹಸವನ್ನು ಮಾಡಿದ ಧನ್ಯತೆಯ ಭಾವ ಗೋಚರಿಸುತ್ತಿತ್ತು. ಬ್ರಹ್ಮಶ್ರೀ ನಾರಾಯಣಗುರುಗಳು ಗುಹೆಯಲ್ಲಿ ತಪಸ್ಸುಗೈದಿರುವ ಸ್ಥಳಕ್ಕೆ ಇಕ್ಕಟ್ಟಾದ ಬಂಡೆಗಳ ನಡುವೆ ತೆವಳಿಕೊಂಡು ಸಾಗಿ, ನಾರಾಯಣ ಗುರುಗಳು ಸುಮಾರು ಏಳು ವರ್ಷಗಳ ಕಾಲ ತಪಸ್ಸುಗೈದ ಪವಿತ್ರ ಸ್ಥಳವನ್ನು ಕಣ್ಣಾರೆ ಕಂಡು, ಗುಹೆಯೊಳಗೆ ಸ್ವಾಮಿಗಳ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದ ಮರೆಯಲಾಗದ ಕ್ಷಣ ಎಂದೆಂದಿಗೂ ಅಜರಾಮರವಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಲ್ಲಿಂದ ಮುಂದಕ್ಕೆ ಬೆಟ್ಟದಲ್ಲಿರುವ ಮಾರುತಿ ದೇವರ ದರ್ಶನ ಪಡೆದು ಸುತ್ತಲೂ ಹರಡಿರುವ ಪ್ರಕೃತಿ ರಮಣೀಯ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಸಿಕೊಂಡು ಬೆಟ್ಟವನ್ನು ಇಳಿಯಲು ಆರಂಭಿಸಿದೆವು. ಬೆಟ್ಟ ಹತ್ತುವಾಗ ಇದ್ದ ಉದ್ವೇಗ, ಆತಂಕ ಬೆಟ್ಟ ಇಳಿಯುವಾಗ ಅಷ್ಟಾಗಿ ಕಾಡದಿದ್ದರೂ ನಮ್ಮ ಬಂಧುಗಳಲ್ಲಿ ಕೆಲವರಿಗೆ ಒಂದಿಷ್ಟು ಸಣ್ಣ ಪುಟ್ಟ ಸಮಸ್ಯೆಗಳು ಬಂದರೂ, ನಾರಾಯಣ ಗುರುಗಳ ಅನುಗ್ರಹದಿಂದ ಬೆಟ್ಟ ಹತ್ತಿದ ಎಲ್ಲಾ ಬಂಧುಗಳು ಸುಖಾಂತ್ಯವಾಗಿ ಬೆಟ್ಟ ಇಳಿದು ಒಂದು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷೀಭೂತರಾದರು.

ಮರುತ್ವ ಮಲೆಯ ಬೆಟ್ಟವನ್ನು ಹತ್ತಿ ಇಳಿದ ನಂತರ ಆಶ್ರಮದಲ್ಲಿ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಿ ಕನ್ಯಾಕುಮಾರಿಯಲ್ಲಿ ಹಡಗು ಯಾನಕ್ಕೆ ಸಿದ್ಧರಾದೆವು. ವಿಶಾಲವಾದ ಸಾಗರದ ಮಧ್ಯದಲ್ಲಿ ವಿಸ್ತಾರವಾದ ಹಡಗು ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ತುಂಬಿಸಿಕೊಂಡು ಪ್ರಶಾಂತ ಸಮುದ್ರದಲ್ಲಿ ಗಜಗಾಮಿನಿಯಂತೆ ಮುಂದೆ ಸಾಗುತ್ತಿದ್ದಂತೆ ನಮ್ಮಲ್ಲಿನ ಅವ್ಯಕ್ತ ಸಂತೋಷ ಇಮ್ಮಡಿಯಾಯಿತು. ಹಡಗಿನಿಂದ ಇಳಿದು ಸಮುದ್ರ ಮಧ್ಯದಲ್ಲಿರುವ ಪಾರ್ವತಿ ದೇವಿಯು ಒಂಟಿ ಕಾಲಿನಲ್ಲಿ ಈಶ್ವರನ ಒಲಿಸಲು ತಪಸ್ಸುಗೈದ ಹೆಜ್ಜೆ ಗುರುತನ್ನು ಕಣ್ಣಾರೆ ಕಂಡು ಆನಂದತುದಿಲರಾದೆವು.

ಯುವಕರೆ ಏಳೀರಿ, ಎದ್ದೇಳಿರಿ…ಈ ಜಗದ ಒಳಿತಿಗೆ ಹೋರಾಡಿರಿ ಎನ್ನುವ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಪಾರಿವ್ರಾಜಕ ಸಂತ ಸ್ವಾಮಿ ವಿವೇಕಾನಂದರ ಏಕಾಶಿಲಾ ಮೂರ್ತಿಯ ದರ್ಶನ ಪಡೆದು ಪುನೀತರಾದೆವು. ಇಂದಿಗೂ ಸ್ವಲ್ಪವೂ ಶಿಥಿಲವಾಗದ ಈ ಮೂರ್ತಿಯನ್ನು ಯಾವ ಲೋಹದಿಂದ ಮಾಡಿರುವರು ಎನ್ನುವುದು ಆಂಗ್ಲರಿಗೂ ತಿಳಿಯದ ಸತ್ಯವಾಗಿತ್ತು. ಸ್ವಾಮಿ ವಿವೇಕಾನಂದರ ಧ್ಯಾನ ಮಂದಿರದಲ್ಲಿ ಸ್ವಲ್ಪ ಹೊತ್ತು ಧ್ಯಾನಿಸಿ ನಂತರ ವಿಶಾಲ ಸಾಗರದ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಂಡು, ದೂರದಲ್ಲಿದ್ದ ತಮಿಳುನಾಡಿನ ಸರ್ವಜ್ಞನೆಂದು ಪ್ರಸಿದ್ಧರಾಗಿದ್ದ ಕವಿ ತಿರುವಳ್ಳುವರ್ ಪ್ರತಿಮೆಯನ್ನು ನೋಡಿ ಆನಂದಿಸಿದೆವು. ಎಲ್ಲರೂ ಮರಳಿ ಹಡಗಿನಲ್ಲಿ ಯಾನ ಆರಂಭಿಸಿ ಹಡಗಿನಿಂದ ಇಳಿದು ದಣಿವನ್ನು ನಿವಾರಿಸಿಕೊಂಡು ಕೆಲವು ಬಂಧುಗಳು ಸಂತೆಯಲ್ಲಿ ವಸ್ತುಗಳನ್ನು ಖರೀದಿಸಲು ಹೊರಟರೆ ಮತ್ತೆ ಕೆಲವು ಬಂಧುಗಳು ಮೂರು ಸಮುದ್ರಗಳು ಒಂದೆಡೆ ಸೇರುವ ತ್ರಿವೇಣಿ ಸಂಗಮವನ್ನು ವೀಕ್ಷಿಸಲು ಹೊರಟೆವು.

ತ್ರಿವೇಣಿ ಸಂಗಮದ ವೀಕ್ಷಣೆಯ ನಂತರ ಮತ್ತೆ ಆಶ್ರಮಕ್ಕೆ ಹಿಂತಿರುಗಿ ಮಧ್ಯಾಹ್ನದ ಸಹಭೋಜನವನ್ನು ಸ್ವೀಕರಿಸಿದೆವು. ಮಧ್ಯಾಹ್ನದ ಭೋಜನದ ನಂತರ ಶಿವಗಿರಿ ಯಾತ್ರೆಯ ಕೊನೆಯ ಕ್ಷೇತ್ರ ದರ್ಶನ ತಿರುವನಂತಪುರದ ಅನಂತ ಪದ್ಮನಾಭ ದೇಗುಲ ದರ್ಶನಕ್ಕೆ ದೇಗುಲದ ನಿಯಮಕ್ಕೆ ಚ್ಯುತಿ ಬಾರದಂತೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ದಿರಿಸಿನಲ್ಲಿ ಎಲ್ಲರೂ ಮಿಂದೆದ್ದು ಮಡಿಯುಟ್ಟರು. ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ತಿರುವನಂತಪುರದ ಅನಂತ ಪದ್ಮನಾಭ ದೇವಸ್ಥಾನಕ್ಕೆ ತಲುಪಿ ಎಲ್ಲರೂ ಭಕ್ತಿಭಾವದಿಂದ ಸಾಲಾಗಿ ಸಾಗಿ ಅನಂತ ಪದ್ಮನಾಭ ಸ್ವಾಮಿಯ ದರುಶನ ಪಡೆದು ಕೃತಾರ್ಥರಾದೆವು. ದೇವಸ್ಥಾನದಲ್ಲಿ ನೀಡಿದ ಹಾಲುಪಾಯಸವನ್ನು ಸವಿದು ದೇಗುಲದ ಪುರಾತನ ವಾಸ್ತು ಶಿಲ್ಪದ ಗತವೈಭವವನ್ನು ಕಣ್ತುಂಬಿಕೊಂಡು ಮರಳಿ ಗೂಡಿಗೆ ಪಯಣ ಬೆಳೆಸಲು ತಿರುವನಂತಪುರದ ರೈಲು ನಿಲ್ದಾಣಕ್ಕೆ ಬಂದು ತಲುಪಿದೆವು.

ಹೀಗೆ ಎರಡು ದಿನಗಳ ಶಿವಗಿರಿ ಯಾತ್ರೆ ಕೇವಲ ಯಾತ್ರೆಯಾಗಿರದೆ ಅರಿವಿನ ಯಾತ್ರೆಯಾಗಿ, ಜಗದ್ಗುರು ನಾರಾಯಣ ಗುರುಗಳ ಸಂಪೂರ್ಣ ಜೀವನಾಮೃತದ ಸಾರವಾಗಿ, ಯುವವಾಹಿನಿಯ ವಿವಿಧ ಘಟಕಗಳ ಸದಸ್ಯರುಗಳು ಒಂದೇ ತಾಯಿಯ ಮಕ್ಕಳಂತೆ ನಕ್ಕು ನಲಿದು ಬೆರೆತು ಕುಣಿದ ಜಾತ್ರೆಯಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಯಾತ್ರೆಯಾಗಿ ಒಂದು ಅಭೂತಪೂರ್ವ ಯಶೋಗಾಥೆಯಾಗಿ ಸರ್ವ ಸದಸ್ಯರ, ಸದಸ್ಯ ಬಂಧುಗಳ ಮನದಾಳದಲ್ಲಿ ಆಳವಾಗಿ ಪಜ್ಜೆಯೂರಿದ ಯಾತ್ರೆಯಾಗಿ ಇಂದಿಗೂ, ಮುಂದಿಗೂ, ಮುಂದೆಂದಿಗೂ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರ, ಕಾರ್ಯದರ್ಶಿಯವರ, ನಾರಾಯಣ ಗುರು ಪ್ರಚಾರ ನಿರ್ದೇಶಕರ, ಸರ್ವ ಪದಾಧಿಕಾರಿಗಳ, ಮಾಜಿ ಅಧ್ಯಕ್ಷರುಗಳ, ವಿವಿಧ ಘಟಕಗಳ ಸದಸ್ಯರ, ಎಲ್ಲಕ್ಕಿಂತಲೂ ಮುಖ್ಯವಾಗಿ ಹಿರಿಯ ಚೇತನ ರಾಮಚಂದ್ರ ಪೂಜಾರಿಯವರ ದಣಿವರಿಯದ ಮೌಲ್ಯಯುತ ಸಲಹೆ, ಮಾರ್ಗದರ್ಶನದಿಂದ ಅವಿಸ್ಮರಣೀಯವಾಗಿ ಮೂಡಿ ಬರುವಲ್ಲಿ ಸಾರ್ಥಕ್ಯ ಪಡೆಯಿತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!