Yuvavahini

MAR 15, 2017 7.22 AM IST

ಯುವ ಸಿಂಚನ - ಆಶಯ : ಮುದ್ದು ಮೂಡು ಬೆಳ್ಳೆ

ಕಾರಣಿಕ ಪುರುಷರಿಂದ ಸಮಾಜಕ್ಕೆ ಪ್ರೇರಣೆ

ಜನಪದ ವೀರರು ಅಥವಾ ಸಾಂಸ್ಕೃತಿಕ ಸ್ತ್ರೀ, ಪುರುಷರನ್ನು ಕಾರಣಿಕ ಶಕ್ತಿಗಳಾಗಿ ಪರಿಭಾವಿಸಲಾಗಿರುವುದು ತುಳುವ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ತಮ್ಮ ಕಾಲದ ವೀರರ ಧೈರ್ಯ ಸಾಹಸ ರೋಮಾಂಚಕ ಗಾಥೆಯನ್ನು ಅದರಿಂದ ರೋಮಾಂಚಿತರಾದ ಇಲ್ಲವೇ ಸ್ಫೂತಿ ಪಡೆದ ಜನಸಮುದಾಯ ಹಾಡುಕಟ್ಟಿ, ಕಥೆ ಪೋಣಿಸಿ, ಸಮಾಜದಲ್ಲಿ ಒಬ್ಬರಿಂದೊಬ್ಬರಿಗೆ, ತಿಳಿಸಿ ಅದು ತಲೆಮಾರಿನಿಂದ ತಲೆಮಾರಿಗೆ ಬಾಯ್ದೆರೆಯಾಗಿ ಹರಿದು ಬಂದ ಪರಂಪರೆ ನಮ್ಮ ಮುಂದಿದೆ. ಇಂತಹ ಪರಂಪರೆ ಭಾರತ ದೇಶದಲ್ಲಷ್ಟೇ ಅಲ್ಲದೆ ಮಧ್ಯ ಏಷಿಯಾ, ಚೈನಾ, ಆಫ್ರಿಕಾ, ಇಂಡೋನೇಶಿಯಾ, ಫಿನ್ಲೆಂಡ್ ಮತ್ತಿತರ ದೇಶಗಳಲ್ಲೂ ಕಂಡು ಬಂದಿದೆ. ಭಾರತದಲ್ಲೂ ಉತ್ತರ ಭಾರತದ ಕೆಲವೆಡೆ ಹಾಗೂ ದಕ್ಷಿಣ ಭಾರತದ ತಮಿಳುನಾಡು, ಕೇರಳ ರಾಜ್ಯಗಳಲ್ಲೂ ವಿಫುಲ ವೀರಾರಾಧನೆಯಿದೆ.

ಆದರೆ ತುಳುನಾಡಿನ ಕೋಟಿ ಚೆನ್ನಯ, ದೇಯಿಬೈದತಿ, ಸಿರಿ, ಬಬ್ಬುಸ್ವಾಮಿ, ತನ್ನಿಮಾನಿಗ, ಕಲ್ಕುಡ-ಕಲ್ಲುರ್ಟಿ, ಕೊರಗತನಿಯ, ಕಾಂತಬಾರೆ-ಬೂದಬಾರೆಯರಂತಹ ಸಾಂಸ್ಕೃತಿಕ ಸ್ತ್ರೀ ಪುರುಷರ ಉದಾಹರಣೆಗಳು ಪ್ರತ್ಯೇಕ ಸ್ತರದಲ್ಲಿ ತೋರುತ್ತದೆ. ಅದರಲ್ಲೂ ಬಿಲ್ಲವ ಅವಳಿ ವೀರರಾದ ಕೋಟಿ ಚೆನ್ನಯರು, ಕಾಂತಬಾರೆ ಬೂದಬಾರೆಯರು ತಮ್ಮ ಜನನ, ಜೀವಿತದ ಘಟನೆಗಳು, ’ಮಾಯ’ಕ್ಕೆ ಸೇರಿದ ಸನ್ನಿವೇಶಗಳ ಕಾರಣದಿಂದ ’ಕಾರಣಿಕ ಪುರುಷ’ರೆಂಬ ಉನ್ನತ ಸ್ಥಾನಕ್ಕೇರಿ ಜನಮನದಲ್ಲಿ ಆರಾಧನೆಗೆ ಒಳಪಟ್ಟವರು. ವರ್ತಮಾನದ ಕಾಲಘಟ್ಟದಲ್ಲಿ ಈ ಆರಾಧನೆಗೆ ಮಿಗಿಲಾಗಿ, ಇಂತಹ ವೀರರು ಸಮಾಜಕ್ಕೆ ನೀಡಿದ ಪ್ರೇರಣೆ ಏನು ಹೇಗೆ ಎಂಬ ಕುರಿತು ವಿಚಾರ ಮಾಡುವುದು ಸೂಕ್ತ.

ಕಾರಣಿಕ ಪುರುಷರೆನಿಸಿದರೂ ಕೂಡಾ, ಕೋಟಿಚೆನ್ನಯರಾಗಲೀ, ಕಾಂತಬಾರೆ ಬೂದಬಾರೆಯರಾಗಲೀ, ನಮ್ಮ ನಿಮ್ಮಂತೆ ಈ ಭೂಮಿಯಲ್ಲಿ ತಾಯಿ ಗರ್ಭದಲ್ಲಿ ಜನಿಸಿದವರು. ರಾಜ ಮಹಾರಾಜರ ಮಕ್ಕಳಾಗಿ ಅಲ್ಲ, ಬಡ ಕುಟುಂಬದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ. ಕುಲೀನತೆ, ಪರಿಶುದ್ಧತೆ, ವೃತ್ತಿ ನೈಪುಣ್ಯತೆಗಳನ್ನು ಮೈಗೂಡಿಸಿಕೊಂಡಿದ್ದರೂ ಕೋಟಿ ಚೆನ್ನಯರನ್ನು ಹೆತ್ತ ದೇಯಿ-ಕಾಂತಣ ಬೈದ್ಯರೇನೂ ಆರ್ಥಿಕ ಶ್ರೀಮಂತರೋ, ರಾಜಮಹಾರಾಜರೋ ಆಗಿರಲಿಲ್ಲ. ಕಾಂತಬಾರೆ ಬೂದಬಾರೆಯರನ್ನು ಹೆತ್ತ ಆಚು ಬೈದಿತಿ ಕುಂದಯ ಬಾರೆಯರೂ ಸಾಮಾನ್ಯ ಬಡಕುಟುಂಬದವರೇ. ಹಾಗಿದ್ದೂ ಪಡುಮಲೆಯ ಅವಳಿವೀರರೂ, ಮುಲ್ಕಿ ಸೀಮೆಯ ಅವಳಿ ವೀರರೂ ಇಡಿಯ ಸಮಾಜದ ಅಂತಃಶಕ್ತಿಯನ್ನು ಮೀಟಿ ಜನಾಂಗವೀರರಾಗಿ ಎದ್ದು ನಿಂತರು! ಇದಕ್ಕೆ ಅವರು ಮೈಗೂಡಿಸಿಕೊಂಡ ಲಕ್ಷಣಗಳೇನು, ಯಶಸ್ಸಿಗಾಗಿ ಹೋರಾಡಿದ ಹಾದಿಗಳೇನು? ಅವರ ಹೋರಾಟ ಯಾವುದಕ್ಕಾಗಿ ಎಂದು ನಾವು ಯೋಚಿಸಬೇಕು.

ಸತ್ಯ, ಧರ್ಮ, ನಿಷ್ಠೆ, ಸ್ವಾರ್ಥತ್ಯಾಗ, ಸಾಧನೆಯ ಹಿಂದೆ ನಿರಂತರ ಛಲದ ಯತ್ನ, ದುಡಿದು ಅನ್ನ ಸಂಪಾದಿಸುವ ಸ್ವಾಭಿಮಾನ, ನಾಡಿನ-ಪ್ರಭುತ್ವದ ರಕ್ಷಣೆ, ಆತ್ಮಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭದಲ್ಲಿ ತಲೆಯೆತ್ತಿ ಪ್ರತಿಭಟಿಸುವ ಎದೆಗಾರಿಕೆ-ಅವರನ್ನು ಅಜರಾಮರರಾಗಿಸಿತು.

ಸತ್ಯೊಡು ಬತ್ತಿನಕಲೆಗ್ ತಿಗಲೆಡ್ ತಾದಿ ಕೊರ್ಪ, ತತ್ತ್‌ದ್ ನಡತಿನಕಲೆಗ್ ಸುರಿಯೊಡು ತಾದಿ ತೋಜಾವ ಎಂದು ಧೀರೋದಾತ್ತವಾಗಿ ನುಡಿದವರು ’ನಂಬಿನಕಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ’ ಎಂಬ ಅಭಯ ವಾಕ್ಯವಿತ್ತವರು ಕೋಟಿ ಚೆನ್ನಯರು. ತತ್ವ ನಿಷ್ಠ ಹೋರಾಟ ಮಾಡಿ, ವಂಚನೆ-ದೌರ್ಜನ್ಯಗಳನ್ನು ಪ್ರತಿಭಟಿಸಿ, ದುಷ್ಟರನ್ನು ಶಿಕ್ಷಿಸಿ, ನಂಬಿದ (ಸಹಾಯಯಾಚಿಸಿದ)ವರಿಗೆ ಬೆಂಗಾವಲ ಆಸರೆಯಾಗಿ, ಗೆಲುವು ಸಾಧಿಸಿಕೊಟ್ಟು ವೀರಮರಣವನ್ನಪ್ಪಿದ ಬಳಿಕ ಗರೋಡಿಗಳಲ್ಲಿ ’ಬೈದ್ಯೆರ್’ ಎಂಬುದಾಗಿ ಆರಾಧನೆಗೆ ಒಳಗಾಗಿ ಕಾರಣಿಕ ಶಕ್ತಿಗಳೆನಿಸಿದವರು ಕೋಟಿ ಚೆನ್ನಯರು. ಅವರ ಹೋರಾಟ ತ್ಯಾಗ ಬಲಿದಾನಗಳು ಈ ದೇಶದಲ್ಲಿ ತುಳಿಯಲ್ಪಟ್ಟವರ ಹೋರಾಟದ ಒಂದು ಪ್ರಮುಖ ಘಟ್ಟ. ಚರಿತ್ರೆಯಲ್ಲಿ ಅನ್ಯಾಯ ಅಧರ್ಮಗಳ ವಿರುದ್ಧ ಸೆಣಸಿದ ಅವರ ವೀರಗಾಥೆ ಪಾಡ್ದನ ರೂಪದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿತು. (ಹಾಗೆ ಸಂದವರೆಲ್ಲ ಸ್ಮರಣೀಯರು).

ಬಾಲ್ಯದಲ್ಲಿಯೇ ಹೆತ್ತ ತಾಯಿಯನ್ನು ಕಳೆದು ಕೊಂಡರೂ ಅಜ್ಜ ಸಾಯನ ಬೈದ್ಯನ ಆರೈಕೆಯಲ್ಲಿ ಬೆಳೆದು ನಾಡಿನೊಡೆಯ ಬಲ್ಲಾಳರ ಮಮತೆಯ ಆಸರೆ ಪಡೆದು, ಯೋಗ್ಯ ಸಂಸ್ಕಾರವಂತರಾಗಿ ಯುದ್ಧ ವಿದ್ಯೆಗಳನ್ನು ಕಲಿತು, ಕೃಷಿ ಕಾರ್ಯ ನಡೆಸಿ, ಸಮಾಜ ಕಂಟಕನಾದ ಬುದ್ಯಂತನನ್ನು ಮರ್ದಿಸಿ ಊರಿಗೆ ನೆಮ್ಮದಿಯ ಉಸಿರು ನೀಡಿ, ಬಲ್ಲಾಳರು ವಾಗ್ದಾನದಂತೆ ನಡೆಯಲು ತಪ್ಪಿದಾಗ ಬೀಡಿಗೆ ಗಡುವಿಟ್ಟು, ತಾಯಹರಕೆ ತೀರಿಸಲು ಹೊರಟವರು ಕೋಟಿ ಚೆನ್ನಯರು. ಮುಂದೆ ಅವರ ದಾರಿ, ಎಣ್ಮೂರಿನ ಯುದ್ದ ಜೈಸುವವರೆಗೂ ಅವರ ಸತ್ಯಧರ್ಮದ ನಡವಳಿಕೆ, ಗುರುಹಿರಿಯರ ಮೇಲಿನ ಭಕ್ತಿ, ಅನ್ಯಾಯದ ವಿರುದ್ದ ಪ್ರತಿಭಟನೆ, ವೀರಮರಣಗಳೆಲ್ಲವೂ ಸಮಾಜಕ್ಕೆ ತೋರುಗಂಬದಂತೆ ನಿಂತವು.

ಮುಲ್ಕಿ ಸೀಮೆಯ ಕಾಂತಬಾರೆ ಬೂದಬಾರೆಯರದೂ ಹೆಚ್ಚು ಕಡಿಮೆ ಇದೇ ಸ್ವರೂಪದ ಚರಿತ್ರೆ. ಶಿಸ್ತು, ಸನ್ನಡತೆ, ನೈಷ್ಠಿಕ ಬ್ರಹ್ಮಚರ್ಯ, ದೇಹ ಮನಸ್ಸುಗಳನ್ನು ಸುಸ್ಥಿತಿಯಲ್ಲಿರಿಸಿಕೊಂಡು ಸಾಧನೆ, ಕೃಷಿಕಾಯಕ, ನೀರಾವರಿ ತೋಡು ಕೆರೆಗಳ ನಿರ್ಮಾಣ, ಅಂಗ ಸಾಧನೆಗೆ ಸಸಿಹಿತ್ತಿಲಿನಲ್ಲಿ ಗರೋಡಿ ನಿರ್ಮಾಣ, ಸೀಮೆಯ ರಕ್ಷಣೆಗೆ ಸಾವಂತರಸರಿಗೆ ಬಲಗೈಬಂಟರಾಗಿ ಹೋರಾಟ, ಶತ್ರುಗಳ ಹುಟ್ಟಡಗಿಸಿದ ಬಳಿಕ ವೀರಮರಣ (ಅಥವಾ ಭಕ್ತಾದಿಗಳ ಪರಿಭಾಷೆಯಲ್ಲಿ ’ಮಾಯ’ಕ್ಕೆ ಸೇರಿಕೊಂಡದ್ದು)

ಇಂಥ ಕಾರಣಿಕ ಪುರುಷರ ಚರಿತ್ರೆಯಿಂದ ಇಂದಿನ ಸಮಾಜ ಮುಖ್ಯವಾಗಿ ನಮ್ಮ ಯುವಜನಾಂಗ ಅರಿತುಕೊಳ್ಳಬೇಕಾದುದು ಸಾಕಷ್ಟಿದೆ. ಅವರು ತಮ್ಮ ಸ್ವಾರ್ಥಕ್ಕಾಗಿಯೋ ಸ್ವಂತ ಸುಖಕ್ಕಾಗಿಯೋ ಯೋಚಿಸಲಿಲ್ಲ, ಹೋರಾಡಲಿಲ್ಲ. ಆದರೆ ಜನಾಂಗದ ಉದ್ಧಾರಕ್ಕಾಗಿ, ಸಮಾಜದ ಕೀಳರಿಮೆಯನ್ನು ತೊಡೆಯುವ ರೀತಿಯಲ್ಲಿ ನ್ಯಾಯೋಚಿತವಾಗಿ ಧರ್ಮರಕ್ಷಣೆಗಾಗಿ ಹೋರಾಟ ನೀಡಿದರು. ತಮ್ಮ ಕಾಲದ ಸಮಾಜದವರ ಮನಪರಿವರ್ತನೆಗೆ ಕಾರಣರಾದರು. ಸಮಾಜದಲ್ಲಿ ಆತ್ಮಸ್ಥೈರ್ಯವನ್ನು, ಒಗ್ಗಟ್ಟನ್ನು, ದುಡಿಮೆಯ ಮನೋಧರ್ಮವನ್ನು, ಸಹಬಾಳ್ವೆಯ ಚಿಂತನೆಯನ್ನೂ ಚಿಗುರಿಸಿದರು. ವಿವಿಧ ಸಂಕುಚಿತತೆ, ಜಾಡ್ಯ, ವಿಘಟನೆಗಳಿಂದ ಅತಂತ್ರರಾಗುತ್ತಿರುವ ಯುವಜನಾಂಗ ಎಚ್ಚರಗೊಳ್ಳಬೇಕು. ಸಚ್ಚಾರಿತ್ರ್ಯವನ್ನು, ಶಕ್ತಿ ಸಾಮರ್ಥ್ಯವನ್ನು, ಮಾನವೀಯ ಗುಣಗಳನ್ನು ಇಂಥ ಸಾಂಸ್ಕೃತಿಕ ವೀರರಂತೆ ರೂಢಿಸಿಕೊಳ್ಳುವ ಮೂಲಕ ಅವರ ಆರಾಧನೆಗೆ ನೈಜ ಅರ್ಥವನ್ನು ಪ್ರತಿಬಿಂಬಿಸಬೇಕಾಗಿದೆ. ಈ ವೀರರು ಒದಗಿಸಿದ ಭವ್ಯ ಪರಂಪರೆಯ ಧೀರೋದಾತ್ತ ಇತಿಹಾಸ ನಮ್ಮದು. ಅದಕ್ಕೆ ತಕ್ಕಂತಹ ವರ್ತಮಾನದ ನಡವಳಿಕೆ, ಒಗ್ಗಟ್ಟು, ಮನೋಬಲ ನಮ್ಮದಾಗಲಿ ಎಂಬುದೇ ನಮ್ಮ ಆಶಯ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!