ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ, ಕಲೆ, ಸಾಹಿತ್ಯ, ಭಜನಾ ಹಾಗೂ ನೃತ್ಯ ತಂಡಗಳ ರಚನೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜೂನ್ 21ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿ, ಕಲೆ, ಸಾಹಿತ್ಯ, ಭಜನಾ ಹಾಗೂ ನೃತ್ಯ ತಂಡಗಳ ರಚನೆಯ ಉದ್ದೇಶ, ಕಾರ್ಯಯೋಜನೆ ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರ್.ಜೆ. ಹಾಗೂ ಸಾಹಿತಿ ವಿನೋದ್ ಕುಂಪಲ ಅವರು ಯುವ ಪ್ರತಿಭೆಗಳು ಸಮಯಪ್ರಜ್ಞೆಯೊಂದಿಗೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ನಿರಂತರ ಸಾಧನೆಯತ್ತ ಸಾಗಬೇಕೆಂದು ಕರೆ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ವೇಣೂರು ಸಂಘಟನೆಯ ಚಟುವಟಿಕೆಗಳು ಹಾಗೂ ಯುವಜನರ ಪಾತ್ರದ ಕುರಿತು ಮಾತನಾಡಿದರು. ಸನ್ಮಾನಿತ ಸುಧೀಂದ್ರ ಜೆ. ಶಾಂತಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಮಾಜಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಧೀಂದ್ರ ಜೆ. ಶಾಂತಿ, ಅಗ್ನಿವೀರ್ ಜೆಡಿ ಹುದ್ದೆಗೆ ಆಯ್ಕೆಯಾದ ವಿರಾಜ್ ಪೂಜಾರಿ ಪಣಪಿಲ, ಭಜನಾ ಕ್ಷೇತ್ರದ ಹರ್ಷಾ ಯು. ಕೋಟ್ಯಾನ್, ನೃತ್ಯ ಹಾಗೂ ಕಲೆ ಕ್ಷೇತ್ರದ ಕೀರ್ತನ್ ಎಸ್. ಶಾಂತಿ ಮತ್ತು ಕಲೆ-ಸಾಹಿತ್ಯ ಕ್ಷೇತ್ರದ ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಅವರನ್ನು ಸನ್ಮಾನಿಸಲಾಯಿತು.
ಪೂರ್ಣಿಮಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರೆ, ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಸ್ವಾಗತಿಸಿದರು. ಯುವಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ ಮೂಡುಬಿದಿರೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಪ್ರತಿಭಾ ಸುರೇಶ್, ಕೋಶಾಧಿಕಾರಿ ಜಯಶೀಲಾ ಪೂಜಾರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಗಿರೀಶ್ ಕೋಟ್ಯಾನ್ ಧನ್ಯವಾದ ಸಲ್ಲಿಸಿದರು.


