ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಶಿವಗಿರಿ ಹಾಗೂ ಇತರ ಪುಣ್ಯಕ್ಷೇತ್ರಗಳಿಗೆ ಎರಡು ದಿನಗಳ ಯಾತ್ರೆ ಆಯೋಜಿಸಲಾಯಿತು. ಯಾತ್ರೆಯ ಮೊದಲ ದಿನ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಾರದಾ ಪೀಠ, ತಪೋಭೂಮಿ ಸಮಾಧಿ ಸ್ಥಳ, ಗುರುಗಳು ಜನಿಸಿದ ಚೆಂಬಳಂತಿ, ಕುನ್ನುಂಪಾರೆ ಬಾಲಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಗುರುಗಳು ಪ್ರಥಮವಾಗಿ ಪ್ರತಿಷ್ಠಾಪಿಸಿದ ಅರಿವಿಪುರ ಶಿವ ದೇವಸ್ಥಾನಗಳಿಗೆ ಭೇಟಿ ನೀಡಲಾಯಿತು. ಬಳಿಕ ಕನ್ಯಾಕುಮಾರಿ ದೇವಸ್ಥಾನಕ್ಕೂ ಭೇಟಿ ನೀಡಲಾಯಿತು.

ಮುಂದುವರಿದಂತೆ, ಗುರುಗಳು ಸುಮಾರು ಆರು ವರ್ಷ ತಪಸ್ಸು ಮಾಡಿ ಸಿದ್ಧಿ ಪಡೆದ 1500 ಅಡಿ ಎತ್ತರದ ಮರುತ್ವಾ ಮಲೆ ಬೆಟ್ಟ, ಕನ್ಯಾಕುಮಾರಿಯ ರಾಮೇಶ್ವರದಲ್ಲಿರುವ ಸ್ವಾಮಿ ವಿವೇಕಾನಂದರ ಧ್ಯಾನ ಕೇಂದ್ರ ಹಾಗೂ ತಮಿಳುನಾಡಿನ ಖ್ಯಾತ ಕವಿ ತಿರುವಳ್ಳುವರ್ ಪ್ರತಿಮೆ ಸ್ಥಳಕ್ಕೂ ಭೇಟಿ ನೀಡಲಾಯಿತು. ಅಲ್ಲದೇ, ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ದೇವಸ್ಥಾನಕ್ಕೂ ಯಾತ್ರಾರ್ಥಿಗಳು ಭೇಟಿ ನೀಡಿದರು.
ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಗಳು ಪ್ರತಿಯೊಂದು ಕ್ಷೇತ್ರದ ಹಿನ್ನೆಲೆ ಹಾಗೂ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು. ಪ್ರಸಾದ್ ಪಾಲನ್ ಹಾಗೂ ಸದಾನಂದ ಪೂಜಾರಿ ಕುಳಾಯಿ ಅವರು ಸಹಕರಿಸಿದರು.
ಸುಮಾರು 51 ಮಂದಿ ಯಾತ್ರಾರ್ಥಿಗಳು ಈ ಯಾತ್ರೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಮಹೇಶ್ ಕಲ್ಲಪಣೆ, ಕಾರ್ಯದರ್ಶಿ ರಂಜಿತ್ ದರ್ಖಾಸ್ತು, ಕೋಶಾಧಿಕಾರಿ ಹರೀಶ್ ಧೋಳ ಹಾಗೂ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


