ಬಜಪೆ: ಯುವವಾಹಿನಿ ಬಜಪೆ ಘಟಕವು ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಪ್ರತಿ ವರ್ಷವೂ ಹಿಂದೂ ಸಂಪ್ರದಾಯದ ಬಿಸು ಹಬ್ಬವನ್ನು ಆಚರಿಸುತ್ತ ಬರುತ್ತಿರುವುದು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ತಿಳಿಸುವಲ್ಲಿ ಉತ್ತೇಜನ ನೀಡುವಂತಾಗಿದೆ. ಬಿಸು ಪರ್ಬದಂತಹ ಹಬ್ಬಗಳು ನಮ್ಮ ಪರಂಪರೆಯನ್ನು ಜೀವಂತವಾಗಿರಿಸುತ್ತವೆ ಎಂದು ಬಜಪೆ ಶನೀಶ್ವರ ದೇವಸ್ಥಾನದ ಅರ್ಚಕರಾದ ಅಭಿಜಿತ್ ಆನಂದ್ ಅವರು ಹೇಳಿದರು.

ಅವರು ಏಪ್ರಿಲ್ 26, 2026 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ, ಬಜಪೆ ಇಲ್ಲಿ ಯುವವಾಹಿನಿ ಬಜಪೆ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ–ಕರಂಬಾರು ಸಹಯೋಗದೊಂದಿಗೆ ನಡೆದ “ಬಿಸು ಪರ್ಬ–2026” ಸಮಾರಂಭವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಮಾತನಾಡಿದರು.

ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿರೂಪಕರು ಹಾಗೂ ರಂಗಭೂಮಿ ಕಲಾವಿದರಾದ ಕಿರಣ್ ಶೆಟ್ಟಿ ಅತ್ತೂರು ಅವರು ತಮ್ಮ ಉಪನ್ಯಾಸದಲ್ಲಿ ಹಿಂದೂ ಸಂಪ್ರದಾಯದ ಹೊಸ ವರ್ಷದ ಬಿಸು ಆಚರಣೆಯ ವಿಧಿ-ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಯುವವಾಹಿನಿ ಬಜಪೆ ಘಟಕವು ಅಸ್ತಿತ್ವಕ್ಕೆ ಬಂದ ನಂತರ ಪ್ರತಿ ವರ್ಷವೂ ಬಿಸು ಪರ್ಬವನ್ನು ಆಚರಿಸುತ್ತಿರುವುದು ಹಿಂದೂ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯುವವಾಹಿನಿ ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ಸುರೇಶ್ ಪೂಜಾರಿ ಅವರು ಬಜಪೆ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ–ಕರಂಬಾರು ಅಧ್ಯಕ್ಷರಾದ ಶಿವರಾಮ್ ಪೂಜಾರಿ ಉಪಸ್ಥಿತರಿದ್ದರು. ಸದಸ್ಯರು ತಮ್ಮ ಮನೆಯಲ್ಲಿ ಬೆಳೆದ ತರಕಾರಿ ಹಾಗೂ ಫಲವಸ್ತುಗಳನ್ನು ತಂದು ಬಿಸು ಕಣಿ ಇಟ್ಟು, ಸಂಪ್ರದಾಯಿಕ ಉಡುಗೆ ತೊಟ್ಟು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ತಂದರು. ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಬಿಸುವಿನ ವಿಶೇಷ ಊಟೋಪಚಾರವನ್ನು ಎಲ್ಲರೂ ಸವಿದರು.
ಕಾರ್ಯಕ್ರಮದಲ್ಲಿ ಬಿಂದಿಯ ಪ್ರಾರ್ಥನೆ ನಡೆಸಿ, ಚಂದ್ರಶೇಖರ ಪೂಜಾರಿ ಹಾಗೂ ಪೂಜಾ ಕಿರಣ್ ನಿರೂಪಣೆ ಮಾಡಿದರು. ದೇವರಾಜ್ ಅಮೀನ್ ಸ್ವಾಗತಿಸಿ, ಸುಚಿತ ದೇವರಾಜ್ ಧನ್ಯವಾದ ಅರ್ಪಿಸಿದರು.


