ಬೆಂಗಳೂರು: “ಇಂದಿನ ಯುವ ಪೀಳಿಗೆ ಮತ್ತು ಮಹಿಳೆಯರು ಸೋಶಿಯಲ್ ಮೀಡಿಯಾವನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಳಸಬೇಕು. ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜನೆಗೆ ಸೀಮಿತವಾಗದೆ, ಜ್ಞಾನಾರ್ಜನೆ ಮತ್ತು ಸಮಾಜದ ಏಳಿಗೆಗೆ ಪೂರಕವಾಗಿರಲಿ,” ಎಂದು ಬೆಂಗಳೂರು ನಗರದ ಸಹಾಯಕ ಪೊಲೀಸ್ ಆಯುಕ್ತರಾದ (ACP) ರೀನಾ ಸುವರ್ಣ ಅವರು ಕಿವಿಮಾತು ಹೇಳಿದರು.

ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ದಿನಾಂಕ 08.03.2026 ರಂದು ಇತ್ತೀಚೆಗೆ ನಗರದ ಕರ್ನಾಟಕ ಗವರ್ನ್ಮೆಂಟ್ ಸೆಕ್ರೆಟೇರಿಯಟ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಬಲೀಕರಣಕ್ಕೆ ಒತ್ತು: ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಶಿಕ್ಷಣ, ಉದ್ಯೋಗ ಮತ್ತು ಸ್ವಾವಲಂಬನೆ ಕುರಿತು ವಿಶೇಷ ಜಾಗೃತಿ ಮೂಡಿಸಲಾಯಿತು. ಹಿಂದುಳಿದ ವರ್ಗಗಳ ಇಲಾಖೆಯಿಂದ ಮಹಿಳೆಯರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳು, ಸಬ್ಸಿಡಿ ಸಾಲಗಳು ಮತ್ತು ಉದ್ಯಮಾವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, KAS ಮತ್ತು IAS ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಕುರಿತು ತಜ್ಞರು ಮಾರ್ಗದರ್ಶನ ನೀಡಿದರು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸದಸ್ಯೆ ಪ್ರತಿಭಾ ಕುಳಾಯಿ, ಹೈಕೋರ್ಟ್ ವಕೀಲರಾದ ಅಡ್ವೊಕೇಟ್ ಶಿಲ್ಪಾಗೋಗಿ ಮತ್ತು ರೀನಾ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ ಉಪಸ್ಥಿತರಿದ್ದು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಸಾಧಕರಿಗೆ ಗೌರವ: ವಿದ್ಯಾ ನಿಧಿಯ ಸಹಾಯಾರ್ಥವಾಗಿ ಹೊರಬರುತ್ತಿರುವ ‘ಯುವ ಸೇತುಬಂಧ’ ಪುಸ್ತಕದ ಬ್ರೋಶರ್ ಬಿಡುಗಡೆಗೊಳಿಸಲಾಯಿತು. NEET ಪರೀಕ್ಷೆಯಲ್ಲಿ 99.98% ಅಂಕ ಪಡೆದು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಶಾನ್ವಿ ಪೂಜಾರಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿವಿಧ ಚಟುವಟಿಕೆಗಳು: ಚಿತ್ರಾ ಅಂಚನ್ ಅವರ ನೇತೃತ್ವದಲ್ಲಿ ನಡೆದ ಪ್ರಶ್ನೋತ್ತರ ಸಂವಾದವು ನ್ಯಾಯಾಂಗ ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲಿದರೆ, ಚಿತ್ರಾ ಪ್ರಸಾದ್ ಅವರು ಒತ್ತಡ ನಿರ್ವಹಣೆ ಹಾಗೂ ಧ್ಯಾನದ ಬಗ್ಗೆ ಅರಿವು ನೀಡಿದರು. ಪ್ರಜ್ಞಾ ಅವರ ಮಿಮಿಕ್ರಿ ಮತ್ತು ಜಯರಾಜ್ ಅವರ ಆಟೋಟಗಳು ನೆರೆದವರ ಗಮನ ಸೆಳೆದವು.
ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷ ಶಶಿಧರ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಹಿಳಾ ನಿರ್ದೇಶಕರಾದ ಮಧುಶ್ರೀ ಬಂಗೇರ ಮತ್ತು ಶ್ವೇತ ಕೋಟ್ಯಾನ್ ಸಂಘಟಿಸಿದ್ದರು. ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಸಹಕರಿಸಿದರು. ಸಕೇಶ್ ಬುನ್ನನ್ ಮತ್ತು ಪ್ರಿಯಾ ಸಕೇಶ್ ಕಾರ್ಯಕ್ರಮ ನಿರೂಪಿಸಿದರು.


