Yuvavahini

MAY 17, 2017 2.47 PM IST

ಆಶಯ -ಸಿಂಚನ ಮೇ -2017

ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ – ಶ್ರೀಮತಿ ನಿರ್ಮಲಾ ಸಂಜೀವ್, ಸುರತ್ಕಲ್

ಶ್ರೀಮತಿ ನಿರ್ಮಲಾ ಸಂಜೀವ್, ಸುರತ್ಕಲ್

ಮನುಷ್ಯ ಜೀವನ ಶ್ರೇಷ್ಠ ಎಂಬ ಭಾವನೆಯಿಂದ ಬೀಗುತ್ತಿರುವ ನಾವು ನೀವೆಲ್ಲರೂ ಕೆಲವೊಂದು ಸಂದರ್ಭಗಳಲ್ಲಿ ಆಂತರಿಕ ಯಾ ಬಾಹ್ಯ ಒತ್ತಡಗಳಿಂದ ರೋಸಿ ಹೋಗಿ, ಯಾವುದಾದರೂ ಪ್ರಾಣಿಯೋ, ಪಕ್ಷಿಯೋ ಆಗಿ ಹುಟ್ಟುತ್ತಿದ್ದರೆ ಈ ಎಲ್ಲಾ ಸಮಸ್ಯೆಯೇ ಇರುತ್ತಿರಲಿಲ್ಲವೆಂದು ಬಾಲಿಶವಾಗಿ ಯೋಚಿಸೋದು ಸಹಜ ತಾನೇ? ಭೂಮಿಯು ಗುರುತ್ವಾಕರ್ಷಣೆಯ ಬಲದಿಂದ ಸೂರ್ಯನ ಸುತ್ತ ತಿರುಗುತ್ತಿದ್ದರೂ ನಮ್ಮ ಅರಿವಿಗೆ ಬಾರದೆ ಒಂದು ರೀತಿಯಲ್ಲಿ ಯಾವ ದೈಹಿಕ ತಾಪತ್ರಯವೂ ಇರದೆ ಬದುಕುವ ಸೌಭಾಗ್ಯವುಳ್ಳವರು ನಾವು. ಅದೇ ರೀತಿ ನಮ್ಮ ಮನಸ್ಸೆಂಬ ಗುರುತ್ವಾಕರ್ಷಣೆಯ ಬಲ ಸ್ಥಿಮಿತದಲ್ಲಿದ್ದರೆ ಮಾತ್ರ ಮಾನಸಿಕ ಹಾಗೂ ದೈಹಿಕ ನ್ಯೂನತೆಯ ಸಮಸ್ಯೆ ಇರದೆ ಆನಂದಮಯ ಜೀವನ ನಿರ್ವಹಣೆ ಸಾಧ್ಯ. ನಮ್ಮ ಬದುಕಿನ ಎಲ್ಲಾ ರೀತಿಯ ಚಡಪಡಿಕೆ, ಆಗು ಹೋಗುಗಳಿಗೆ ಈ ಮನಸ್ಸೇ ಕಾರಣ. ಭಾವನೆಗಳ ಏರಿಳಿತಗಳು ಏನೇ ಇದ್ದರೂ ಸಮಚಿತ್ತತೆ ಗಳಿಸುವುದರಲ್ಲಿಯೇ ಅಡಗಿದೆ ನಮ್ಮ ಜಾಣತನ.
ಈಗೀಗ ವಿದ್ಯಾವಂತ, ಅವಿದ್ಯಾವಂತರೆಂಬ ಬೇಧವಿಲ್ಲದೆ ಜನರನ್ನು ಕಾಡುತ್ತಿರುವ ಮನೋರೋಗ, ಉದ್ವಿಗ್ನತೆ ಬಹುಶಃ ಈ ಮನಸ್ಸೆಂಬ ಗುರುತ್ವಾಕರ್ಷಣೆಯ ನಿಯಮದ ಅಸ್ಥಿರತೆಯ ಸಂಕೇತ. ಪತ್ರಿಕೆಗಳಲ್ಲಿ ಇತ್ತೀಚೆಗೆ ವೈದ್ಯಕೀಯ ಸಲಹೆಗಳ ಅಂಕಣದಲ್ಲೂ ನಾವು ಇಂತಹ ಹಲವಾರು ಪ್ರಶ್ನೆಗಳ ಮಂಡನೆ ಸಲಹೆಗಾಗಿ ಕಾಣುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಮೂಲ ಕಾರಣ ನಾವು ನಮ್ಮನ್ನು ಎಲ್ಲಾ ತಿಳಿದವರೆಂದು ಭ್ರಮಿಸಿ ಭ್ರಮನಿರಸನಗೊಳ್ಳುತ್ತಿರುವ ಪ್ರಸಂಗಗಳೇ.
ಮುಗ್ಧತೆ ಎಂದಾಗ ನಮ್ಮೆದುರು ನಿಲ್ಲುವಂತದ್ದು ಹಾಳು ಹಸುಳೆಯ ಚಿತ್ರಣ. ಮಗು ಮುಗ್ಧತೆಯ ಪ್ರತೀಕ. ಇಂತಹ ಮಗು ತಂದೆ ತಾಯಿಯರ ಪ್ರೀತಿ ಆರೈಕೆಯಿಂದ ಬೆಳೆದು ಹೊರ ಪ್ರಪಂಚಕ್ಕೆ, ಪರಿಚಯಗೊಳ್ಳುವುದಕ್ಕೆ ತೊಡಗುವುದು ವಿದ್ಯಾಭ್ಯಾಸದ ಸಲುವಾಗಿ ತಂದೆ, ತಾಯಿಯರ ಆದರ್ಶದಿಂದ ಪ್ರಭಾವಿತರಾಗಿರುವ ಈ ಮಕ್ಕಳು ಬಾಲ್ಯಜೀವನದ ತುಂಟಾಟದೊಂದಿಗೆ ಗುರುವೃಂದದ ಆದೇಶಕ್ಕೆ ತಕ್ಕಂತೆ ಬಾಳಲು ಶಕ್ತಿ ಮೀರಿ ಪ್ರಯತ್ನಿಸುವ ನಿಷ್ಟಾವಂತರು. ಅಷ್ಟೇ ಅಲ್ಲ ನಿಷ್ಕಳಂಕ ಮನೋಭಾವನೆ ಹೊಂದಿರುವಂತವರು.
ಇಂದಿನ ಈ ವೈಜ್ಞಾನಿಕ ಯುಗದಲ್ಲಿ ನಾವು ನಮ್ಮ ಮಕ್ಕಳನ್ನು ಯಾವುದೋ ಒಂದು ಒತ್ತಡದಿಂದ ಕಲಿಯುವಿಕೆಗೆ ಮಹತ್ವ ನೀಡಿ ಬಾಲ್ಯ ಸಹಜ ಬದುಕಿನ ಆನಂದ ಸವಿಯದಂತೆ ದೂರ ಇಡುತ್ತಿದ್ದೇವೆ. ಹಿಂದಿನಂತೆ ಅವಿಭಾಜ್ಯ ತುಂಬು ಕುಟುಂಬದಲ್ಲಿ ಎಲ್ಲರೊಂದಿಗೆ ಒಂದಾಗಿ ಬೆರೆತು ಬಾಳುವ ಸಾಮಾಜಿಕ ಪರಿಸ್ಥಿತಿ ಇಂದು ಇಲ್ಲ. ಬದಲಿಗೆ ಒಂದೆರಡು ಮಕ್ಕಳಿರುವ ಇಂದಿನ ಚಿಕ್ಕ ಕುಟುಂಬದಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳು ಸುಖ ದುಃಖಗಳನ್ನು ಹಂಚಿಕೊಂಡು ಮನಸ್ಸನ್ನು ಸಮಚಿತ್ತದಲ್ಲಿ ಇರಿಸಿಕೊಳ್ಳುವ ವಾತಾವರಣದಿಂದ ವಂಚಿತರಾದವರು. ಎಲ್ಲವನ್ನು ಕಳೆದುಕೊಂಡು ಏನನ್ನೇ ಗಳಿಸಲು ವಿದ್ಯೆಯೇ ಮೂಲ ಸಾಧನವೆಂಬ ಸಂಕುಚಿತ ದೃಷ್ಟಿಯಿಂದ ಅವರನ್ನು ಸದಾಕಾಲ ಮಾನಸಿಕ ಒತ್ತಡದಲ್ಲಿರಿಸುವುದು ಕ್ಷೇಮವಲ್ಲ. ನಮ್ಮ ಪ್ರತಿಷ್ಠೆಗೋಸ್ಕರ ಮಕ್ಕಳನ್ನು ನಾವು ಎಳೆದ ಗೆರೆಯ ಮೇಲೆಯೇ ನಡೆಸಲು ಹರಸಾಹಸ ಪಟ್ಟು ಭಯದ ವಾತಾವರಣದಲ್ಲಿ ಬೆಳೆಯುವಂತಹ ದುಃಸ್ಥಿತಿಗೆ ತಳ್ಳುತ್ತಿದ್ದೇವೆ. ‘ವಿದ್ಯೆ ಅರಿವನ್ನು ಮೂಡಿಸಬೇಕೇ ವಿನಾಃ ಆತಂಕವನ್ನಲ್ಲ!’ ಒಬ್ಬ ವೈದ್ಯನ ಮಗ ವೈದ್ಯಕೀಯ ರಂಗದಲ್ಲೇ, ಸೇವೆ ಸಲ್ಲಿಸುವಂತಾಗಬೇಕೆಂಬ ಮೂಲಭೂತ ಧೋರಣೆ ಪ್ರಚಲಿತದಲ್ಲಿರುವ ಕಾಲ ನಮ್ಮದು. ತಂದೆ ಮಾತ್ರ ದುಡಿದು ಮನೆಯಲ್ಲಿ ತಾಯಿಯ ಅಕ್ಕರೆಯ ಆರೈಕೆಯಲ್ಲಿ ಬೆಳೆಯುವ ಭಾಗ್ಯ ಇಂದಿನ ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಮಕ್ಕಳ ಪಾಲಿಗಿಲ್ಲ. ಯಾಕೆಂದರೆ ತಂದೆ, ತಾಯಿ ಇಬ್ಬರೂ ನೌಕರಿಯಲ್ಲಿದ್ದರೆ ಮಾತ್ರ ಜೀವನ ನಿರ್ವಹಣೆ ಮಾಡಬಲ್ಲ ಆರ್ಥಿಕ ಪರಿಸ್ಥಿತಿ ನಮ್ಮದು. ಶಾಲೆಯಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಪಾಠ ಪ್ರವಚನದಲ್ಲಿ ಮುಳುಗಿ ಮನೆಗೆ ಬಂದು ಒಂದಿಷ್ಟು ವಿಶ್ರಾಂತಿ ಪಡೆದು ಅಂದಿನ ಪಠ್ಯ ಚಟುವಟಿಕೆಯ ಪರಿಶೀಲನೆ ತಾನೇ ಅಥವಾ ಮನೆಯವರ ಸಹಾಯದಿಂದ ಮಾಡಿಕೊಳ್ಳುವ ಪರಿಪಾಠ ಹಿಂದೆ ಇದ್ದದ್ದು. ಆದರೆ ಇಂದು ಶಾಲೆಯಿಂದಲೇ ಮನೆ ಪಾಠ… ಗಾಗಿ ಇನ್ನೆಲ್ಲೋ ಹೋಗಿ ರಾತ್ರಿ ಹೊತ್ತಿಗೆ ಮನೆ ಸೇರುವ ವ್ಯವಸ್ಥೆಗೆ ಮಕ್ಕಳನ್ನು ತಳ್ಳುತ್ತಿರುವ ಆಧುನಿಕ ಯುಗ ನಮ್ಮದು. ಮಗುವು ಒಂದು ಯಂತ್ರದಂತೆ ಕಾರ್ಯನಿರ್ವಹಿಸುವಂತೆ ಯೋಚಿಸುವ ಪೈಪೋಟಿಯ ವಾತಾವರಣ ಸೃಷ್ಟಿಯಾಗಿಬಿಟ್ಟಿದೆ. 100% ಅಂಕ ಗಳಿಸಿ ಇತರ ಪಾಲಕರೊಂದಿಗೆ ಜಂಭ ಕೊಚ್ಚಿಕೊಳ್ಳುವ ಮಾತಾಪಿತರು ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ವಿವೇಚನೆಯಿಂದ ಚಿಂತಿಸುತ್ತಿಲ್ಲ ಯಾಕೆ? ಇತರ ಮಕ್ಕಳೊಂದಿಗೆ ಹೋಲಿಸಿ ಸ್ವಾರ್ಥ ಮನೋಭಾವವನ್ನು ಮೈಗೂಡಿಸಲು ಪರೋಕ್ಷವಾಗಿ ತಾನೇ ಕಾರಣೀಭೂತರಾಗುತ್ತಿರುವುದಾದರೂ ಏತಕ್ಕೆ? ಇಂತಹ ಒತ್ತಡದಿಂದ ಗಳಿಸಿದ ವಿದ್ಯೆ ಪ್ರಸ್ತುತ ಬದುಕಿಗೆ ಎಷ್ಟು ಪ್ರಯೋಜನ ಒದಗಿಸಿತು. ಎಂಬುವುದರ ಕುರಿತು ಚಿಂತಿಸುವ ವ್ಯವಧಾನ ಇಂದು ಯಾರಲ್ಲೂ ಇಲ್ಲ ಯಾಕೆ? ಆನಂದದಿಂದ ಯಾವ ಬಾಹ್ಯ ಒತ್ತಡವೂ ಇಲ್ಲದೆ ವಿದ್ಯಾರ್ಜನೆಗಳಿಸುವ ಸೌಭಾಗ್ಯದಿಂದ ವಂಚಿತರಾಗುತ್ತಿರುವ ಈ ಮಕ್ಕಳು ಮಾನಸಿಕವಾಗಿ ಪ್ರಬುದ್ಧತೆಗಳಿಸಿಕೊಳ್ಳದೆ ಹೋಗುತ್ತಿರುವುದಕ್ಕೆ ಈ ಮಾನಸಿಕ ಉದ್ವೇಗವೇ ಕಾರಣವಾಗಿದೆ. ಕ್ಷುಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ, ದುಶ್ಚಟಗಳಿಗೆ ಸುಲಭವಾಗಿ ದಾಸರಾದಂತ ಪ್ರಸ್ತುತ ವಿದ್ಯಮಾನಗಳು ಇಂತಹ ಜೀವನ ನಿರ್ವಹಣಾ ಶೈಲಿಯ ಪ್ರಭಾವಗಳೇ ಆಗಿರಬಹುದಲ್ಲವೇ?
ನಾವು ನಮ್ಮ ಮಕ್ಕಳನ್ನು ನಮ್ಮ ಇಚ್ಛೆಯಂತೆ ಬೆಳೆಸಲು ಪ್ರೇರೇಪಿಸಬಹುದೇ ಹೊರತು ನಮ್ಮ ಇಚ್ಛೆಯೇ ಅವರ ಬದುಕಿನ ಗುರಿಯಾಗಿರಬೇಕೆಂದು ನಿರ್ಬಂಧಿಸುವುದು ತಪ್ಪು. ಬರೇ ಪುಸ್ತಕದ ಹುಳುವಾಗಿ 100% ಅಂಕ ಪಡೆಯುವುದೇ ಮುಖ್ಯ ಉದ್ದೇಶವೆಂಬಂತೆ ಮಕ್ಕಳನ್ನು ಬೆಳೆಸದೆ ಆಸಕ್ತಿ ಇರುವ ಎಲ್ಲಾ ರಂಗಗಳಲ್ಲಿ ಸಾಧ್ಯವಾದಷ್ಟು ತಿಳುವಳಿಕೆ ಪಡೆವ ವಾತಾವರಣ ರೂಪಿಸಿ ಬೆಳೆಸಿದರೆ ಅಂತಹ ಮಕ್ಕಳು ಆತ್ಮ ವಿಶ್ವಾಸದೊಂದಿಗೆ ದೃಢ ಚಿತ್ತರಾಗಿ ಜೀವನ ಪಥದಲ್ಲಿ ಸಾಗಲು ಸಮರ್ಥರಾಗಬಲ್ಲರು. ಇಂದಿನ ವೈಜ್ಞಾನಿಕ ಯುಗದಲ್ಲೂ ಒಬ್ಬ ವೈದ್ಯ. ಅನಾರೋಗ್ಯಕ್ಕೆ ನೀಡುವ ಚಿಕಿತ್ಸೆ ಚುಚ್ಚುಮದ್ದು, ಮಾತ್ರೆಗಳಷ್ಟೇ ಅಲ್ಲ, ಬದಲಿಗೆ ಯೋಗಾಭ್ಯಾಸ, ಧ್ಯಾನ, ಸಂಗೀತದ ಬಗ್ಗೆ ತಿಳಿಹೇಳಿ ಅವುಗಳ ಅನುಷ್ಠಾನದ ಬಗೆಗಿನ ಸಲಹೆಗಳೊಂದಿಗೆ ಚಿಕಿತ್ಸೆ ನೀಡುತ್ತಿರುವುದನ್ನು ನಾವಿಂದು ಗಮನಿಸುತ್ತಿದ್ದೇವೆ. ಮಾನಸಿಕ ಆರೋಗ್ಯ ಸರಿ ಇದ್ದರೆ ದೈಹಿಕವಾಗಿಯೂ ನಾವು ಕ್ರಿಯಾಶೀಲರಾಗಿರಬಹುದು. ಮನಸ್ಸು ಆನಂದಮಯವಾಗಿದ್ದಲ್ಲಿ ಬದುಕಿನ ಪ್ರತಿಯೊಂದು ಕ್ಷಣಗಳನ್ನು ಸಂತಸದಿಂದ ಕಳೆಯುವಂತಹ ಸೌಭಾಗ್ಯ ನಮ್ಮದಾದೀತು. ಮನಸ್ಸನ್ನು ಆನಂದಮಯವಾಗಿ ಇಟ್ಟುಕೊಳ್ಳಬೇಕಾದರೆ ನಾವು ನಮ್ಮ ಮಕ್ಕಳನ್ನು ಬೆಳಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ವಿವಿಧ ಹವ್ಯಾಸಗಳಾದ ಸಾಹಿತ್ಯ, ಕಲೆ, ರಂಗಭೂಮಿ ಮುಂತಾದವುಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಎಲ್ಲಾ ರಂಗಗಳಲ್ಲಿ ಅಂದರೆ ಲಲಿತಕಲೆ, ಸಾಹಿತ್ಯ ರಂಗ, ಉತ್ತಮ ಪುಸ್ತಕಗಳನ್ನು ಓದುವ ಆಸಕ್ತಿ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಬೇಕಾದ ಅವಕಾಶಗಳನ್ನು ಮಕ್ಕಳಿಗೆ ಒದಗಿಸಿ ಕೊಡಬೇಕಾದುದು ಹೆತ್ತವರ ಕರ್ತವ್ಯವಾಗಿದೆ. ಈ ರೀತಿ ವಿವಿಧ ರಂಗಗಳಲ್ಲಿ ಅನುಭವಗಳಿಸುವುದು ಕಲಿಕೆಗೆ ಯಾ ಜ್ಞಾನಾರ್ಜನೆಗೆ ಮಾರಕವೆಂದು ಭಾವಿಸಬಾರದು. ಬದುಕನ್ನು ನೋಡುವ ದೃಷ್ಟಿಕೋನ ವಿಶಾಲಗೊಳ್ಳಬೇಕಾದರೆ ಇಂತಹ ಚಟುವಟಿಕೆ ಗಳು ಅತ್ಯಾವಶ್ಯಕ ಬರೇ ಪುಸ್ತಕದ ಹುಳುವಿನಂತೆ ಓದೇ ಸಾಕೆಂದು ಪ್ರಚೋದಿಸಿದರೆ ಅಂತಹ ಮಕ್ಕಳ ಬದುಕು ಸಂಕೀರ್ಣತೆಗೊಳಪಟ್ಟು ಮುಂದೆ ಅವರು ಇಟ್ಟುಕೊಂಡಿರುವ ಗುರಿ ಸಾಧಿಸಲಿಕ್ಕಾಗದೆ ಹೋದಾಗ ಮಾನಸಿಕ ಅಸ್ಥಿರತೆಯಿಂದ ಬಳಲುವ ಪ್ರಸಂಗ ಒದಗಿ ಬಂದೀತು. ಅಷ್ಟೇ ಅಲ್ಲ ಒಂದು ವೇಳೆ ತಾನು ಇಚ್ಛಿಸಿದ ರೀತಿಯಲ್ಲಿ ಉನ್ನತ ಸ್ಥಾನಗಳಿಸಿದರೂ ಎಲ್ಲರೊಂದಿಗೆ ಮುಕ್ತವಾಗಿ ಬೆಳೆದು ಉತ್ತಮ ವ್ಯಕ್ತಿಯೆಂಬ ಮನ್ನಣೆ, ಹೆಗ್ಗಳಿಕೆ ಗಳಿಸುವುದರಲ್ಲಿ ಸಫಲತೆ ಹೊಂದದೆ ಹೋಗಬಹುದು. ಆನಂದ ಚಿತ್ತದಲ್ಲಿರುವ ವ್ಯಕ್ತಿ ಮಾತ್ರ ಸಂತೋಷದಿಂದ ಇತರರೊಂದಿಗೆ ಹೊಂದಿಕೊಂಡು ಬಾಳಬಲ್ಲ, ಜನಮನ್ನಣೆ ಗಳಿಸಬಲ್ಲ. ಅಹಂ, ಸ್ವಪ್ರತಿಷ್ಟೆಯಿಂದ ಬೀಗುವ ವ್ಯಕ್ತಿ ಜನರ ಮನಸ್ಸಿಗೆ ಹತ್ತಿರದವನಾಗಿ ಮನ್ನಣೆಗಳಿಸಲಾರ.
ಮನುಷ್ಯನ ಎಲ್ಲಾ ಮಾನಸಿಕ ತೊಂದರೆಗಳಿಗೆ ಆತನ ಒಳಮನಸ್ಸಿನ ಒಂಟಿತನವೇ ಕಾರಣ. ಆ ಒಂಟಿತನವನ್ನು ಇನ್ನೊಬ್ಬರೊಂದಿಗೆ ಹರಟೆ ಹೊಡೆದು ಓಡಿಸುವುದು ಸಾಧ್ಯವಿಲ್ಲ ಬದಲಿಗೆ ತಾನು ಮೈಗೂಡಿಸಿಕೊಂಡಿರುವ ಹವ್ಯಾಸಗಳಿಂದ ನಿವಾರಣೆ ಸಾಧ್ಯ. ಇಂತಹ ಹವ್ಯಾಸ ವ್ಯಕ್ತಿಯ ಜೀವನದ ಮನಸ್ಸಿನಲ್ಲಿ ಗಳಿಸುವಂತದ್ದಲ್ಲ. ಬದಲಿಗೆ ಬಾಲ್ಯದಿಂದಲೇ ಆತನೊಂದಿಗೆ ಬೆಳೆದು ಮೈಗೂಡಿಸಿಕೊಂಡಿರಬೇಕು. ಹಾಗಾದಲ್ಲಿ ಮಾತ್ರ ಮನುಷ್ಯ ಜನ್ಮ ಶ್ರೇಷ್ಠ ಜನ್ಮವಾದೀತು. ಮಾನವನಾಗಿ ಹುಟ್ಟೋದು ಒಂದು ಸೌಭಾಗ್ಯವಾದೀತು. ಇಲ್ಲವಾದಲ್ಲಿ ನಮಗೂ ಪ್ರಾಣಿಗಳಿಗೂ ದೈಹಿಕ ವ್ಯತ್ಯಾಸದ ಹೊರತು ಬೇರೆ ವ್ಯತ್ಯಾಸವಿರದು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!