ರವಿರಾಜ್ ಅಜ್ರಿ:-ವಿಶುಕುಮಾರ್ ಎಂಬ ಬರಹಗಾರನ ಕಥೆ-2

ವಿಶುಕುಮಾರ್ ಹೀಗೊಂದು ನೆನಪು -ರವಿರಾಜ್ ಅಜ್ರಿ

ದಿ .ವಿಶುಕುಮಾರ್

” ನೀವು ಬ್ರಾಹ್ಮಣ ಅಲ್ಲ …!”
” ವಿಶುಕುಮಾರ್ – ಅಷ್ಟು ಸುಲಭವಾಗಿ ನಮ್ಮನ್ನು ಒಪ್ಪಿಕೊಳ್ಳಲು ತಯಾರಿಲ್ಲ” ಎಂದು ಹೇಳಿದ್ದೆ.
ಅಗಲ ಫ್ರೇಮಿನ ಕನ್ನಡಕದ ಒಳಗಡೆ ತೀಕ್ಷಣ ಕಣ್ಣುಗಳು ನಮ್ಮನ್ನು ಅಳೆಯುವಂತಿದ್ದವು.
” ರೂಂಗೆ ಬಾ ನಿಮ್ಮೊಡನೆ ಸ್ವಲ್ಪ ಮಾತಾಡಬೇಕು” ಎಂದು ನನ್ನನ್ನು ಅವರ ರೂಂಗೆ ಕರೆದೊಯ್ದರು.
ನಾನು ಅವರನ್ನು ಹಿಂಬಾಲಿಸಿದೆ .
ಆದರೆ ರೂಂನ ಒಳಗಡೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಅವರನ್ನು ವಿಶುಕುಮಾರ್ ಪರಿಚಯಿಸಿದರು.
” ಇವರು ಆರ್. ನರಸಿಂಹ. ನಮ್ಮ ಸ್ನೇಹಿತರು. ನಾವು ” ಚಿತ್ರದೀಪ” ಹೆಸರಿನ ಸಿನಿಮಾ ವಾರಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದೇವೆ . ನಮಗೆ ಮದರಾಸ್ ನಲ್ಲಿ ನಡೆಯುವ ಚಿತ್ರಗಳ ಚಟುವಟಿಕೆಗಳ ಬಗ್ಗೆ ಬರೆಯುವ ವರದಿಗಾರ ಬೇಕು” ಎಂದರು.
ಸ್ವಲ್ಪ ಹೊತ್ತು ಮೌನ.
ಮತ್ತೆ ಅವರು ಮಾತು ಮುಂದುವರಿಸಿದರು : ” ನಿಮ್ಮ ಸರ್ ನೇಮ್ ಅಜ್ರಿ ಇದೆ- ನೀವು ಬ್ರಾಹ್ಮಣನೇ? ಎಂದು ಪ್ರಶ್ನಿಸಿದರು .
ನನಗೆ ಆಶ್ಚರ್ಯ – ” ಇಲ್ಲ” ಎಂದೆ.
” ನಮಗೆ ಬ್ರಾಹ್ಮಣರನ್ನು ಬಿಟ್ಟು ಬೇರೆ ಯಾರಾದರೂ ಆಗಬಹುದು”
” ನಾನು ಜೈನ” ಎಂದೆ .
” ನಮ್ಮ ‘ ಕೋಟಿ- ಚೆನ್ನಯ’ ಚಿತ್ರದಲ್ಲಿ ಕೋಟಿ ಮಾಡಿದ್ದ ಸುಭಾಷ್ ಪಡಿವಾಳ ಜೈನ. ನಮಗೆ ಜೈನರು ಬೇಕಾದಷ್ಟು ಗೆಳೆಯರಿದ್ದಾರೆ. ಬಾಹ್ಮಣರು ಬಹಳ ಬುದ್ಧಿವಂತರು. ಅವರನ್ನು ಬಿಟ್ಟರೆ ..ಯಾರೂ ಇಲ್ಲಾಂತ ತಿಳಿದುಕೊಂಡಿದ್ದಾರೆ .ನಾವು ಯಾಕೆ ನಮ್ಮ ಬುದ್ಧಿವಂತಿಕೆ ತೋರಿಸಬಾರದು? ” ಎಂದು ಪ್ರಶ್ನಿಸಿದರು.
ನಾನು ಏನು ಉತ್ತರ ಕೊಡಲಿ?
ಇಲ್ಲಿ ಜಾತಿ ವಾಸನೆ ಕಂಡು ಬಂತು. ಬದುಕಿಗಾಗಿ ಊರು ಬಿಟ್ಟು ಬಂದವ. ನನ್ನನ್ನು ” ವಿಜಯಚಿತ್ರ” ಕ್ಕೆ ಸೇರಿಸಿದವರು ಪಿ . ಜಿ. ಶ್ರೀನಿವಾಸ ಮೂರ್ತಿ ಬ್ರಾಹ್ಮಣರು. ಮದರಾಸ್ ನ ಅಮೇರಿಕ ರಾಯಭಾರಿ ಕಚೇರಿಯಲ್ಲಿ ಕನ್ನಡ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು.
ಈ ತನಕ ನನಗೆ ” ಜಾತಿ ವಾಸನೆ” ತಾಗಿರಲ್ಲಿಲ್ಲ. ನನಗೆ ಬದುಕು ಮುಖ್ಯ. ಇದೆಲ್ಲಾ ನನ್ನ ಮನಸ್ಸಿನಲ್ಲಿ ಮೂಡಿ ಬಂದ ಆಲೋಚನೆಗಳು.
” ಅಜ್ರಿ, ನಾವು ಬೆಂಗಳೂರಿಗೆ ಹೋದ ನಂತರ ಅಪೈಂಟ್ ಮೆಂಟ್ ಲೇಟರ್ ಕಳುಹಿಸುತ್ತಿದ್ದೇವೆ. ” ವಿಜಯಚಿತ್ರ” ತಿಂಗಳ ಪತ್ರಿಕೆ- ಆ ಕೆಲಸಕ್ಕೂ ನಮ್ಮ ವಾರಪತ್ರಿಕೆಗೂ ಏನೂ ಸಂಬಂಧ ಬರುವುದಿಲ್ಲ. ಒಟ್ಟಿಗೆ ಮಾಡಿಕೊಂಡು ಹೋಗಬಹುದು. ಬೆಂಗಳೂರಿನಲ್ಲಿ ನಮ್ಮ ಆಫೀಸ್ ನಲ್ಲಿ ನಿಮ್ಮ ಊರಿನವರೇ ಆದ ಗಣೇಶ ಕಾಸರಗೋಡು ಅಂಥ ಒಬ್ಬ ರು ಇದ್ದಾರೆ. ತುಂಬಾ ಒಳ್ಳೆಯವರು. ಮುಂದೆ ನಿಮಗೆ ಅವರು ಸಲಹೆ ನೀಡುತ್ತಾರೆ ” ಎಂದರು.
ಹಾಗೇ ಬೆಂಗಳೂರಿಗೆ ಹೋದ ನಂತರ ಅವರಿಂದ ನನಗೆ ಅಪೈಂಟ್ ಮೆಂಟ್ ಲೇಟರ್ ಬಂತು. ಗಣೇಶ ಕಾಸರಗೋಡು ಅವರಿಂದ ” ಸ್ವಾಗತ” ದ ಪತ್ರ ಕೂಡ ಬಂತು.
ಪತ್ರಿಕೆಗೆ ಒಂದು ಸುದ್ದಿ ಹೇಗೆ ಮಾಡುವುದು? ಇದರ ಪಾಠ ವಿಶುಕುಮಾರ್ ನನಗೆ ಹೇಳಿಕೊಟ್ಟರು. ನಿಮಗೆ ಶ್ರೀ ಕೃಷ್ಣ ಆಲನಹಳ್ಳಿ ಗೊತ್ತಿರಬೇಕಲ್ಲ? ಕನ್ನಡದ ಹೆಸರಾಂತ ಕತೆಗಾರ, ಕಾದಂಬರಿಗಾರ. ” ಕಾಡು”, ” ಭುಜಂಗಯ್ಯನ ದಶವತಾರ” – ಮುಂತಾದ ಕಾದಂಬರಿಗಳನ್ನು ಬರೆದವರು. ಈಗ ಅವರಿಲ್ಲ. ಸಣ್ಣ ವಯಸ್ಸಿನಲ್ಲೇ ತೀರಿಕೊಂಡರು.
ನನಗೊಂದು ಹುಚ್ಚು. ನಮ್ಮ ಕನ್ನಡದವರು ಯಾರೂ ಬಂದರೂ ಅವರನ್ನು ಹೋಗಿ ಭೇಟಿ ಮಾಡಿ ಪರಿಚಯ ಮಾಡಿಕೊಳ್ಳುವುದು. ಅದು ಲೇಖಕರು, ಬರಹಗಾರರು ಎಂದರೆ ಇನ್ನೂ ಹೆಚ್ಚು. ಹಾಗೇ ಶ್ರೀಕೃಷ್ಣ ಆಲನಹಳ್ಳಿಯವರನ್ನು ಪರಿಚಯ ಮಾಡಿಕೊಂಡೆ. ನನ್ನ ಪ್ರವರ ಹೇಳಿಕೊಂಡೆ. ಮಂಗಳೂರು ಕಡೆಯವ ಎಂದೆ. ಆಗ ಅವರು ” ನಿಮಗೆ ಶಿರ್ತಾಡಿ ಗೊತ್ತಲ್ಲ. ಅಲ್ಲಿ ಧರ್ಮಸಾಮ್ರಾಜ್ಯ ಅಂಥ ಎಂ ಎಲ್ ಎ ಇದ್ದರಲ್ಲ ” ಎಂದರು.
” ಹೌದು. ಗೊತ್ತು . ನಿಮಗೆ ಹೇಗೆ ಪರಿಚಯ” ಎಂದೆ.
” ಅವರ ಮಗಳನ್ನು ನಾನು ನೋಡಲು ಹೋಗಿದ್ದೆ ” ಎಂದರು.
ನನಗೆ ಆಶ್ಚರ್ಯ. ಅವರ ಹೆಣ್ಣು ಮಕ್ಕಳಿಗೆ ಆಗಲೇ ಮದುವೆಯಾಗಿದೆ. ಈ ಮನುಷ್ಯ ಏನು ಹೇಳ್ತಾನೆ ಎಂದು.
” ಇಲ್ಲಪ್ಪ …ಕಾಲೇಜು ದಿನಗಳಲ್ಲಿ ಪರಿಚಯ” ಎಂದು ನಕ್ಕರು. ಕೈಯಲ್ಲಿ ಬೇರೆ ಗ್ಲಾಸು ಕೂಡಾ ಇತ್ತು!
ಒಂದು ಥರ ತಿಕ್ಕಲು ಮನುಷ್ಯನಾಗಿ ಕಂಡರು!
ಇವರ ಬಗ್ಗೆ ” ಚಿತ್ರದೀಪ” ದಲ್ಲಿ ವಿಶುಕುಮಾರ್ ಒಂದು ‘ರೈಟ್ ಅಪ್ ‘ ಮಾಡಿದ್ದರು.

ರವಿರಾಜ್ ಅಜ್ರಿ

Leave a Reply

Your email address will not be published. Required fields are marked *

error: Content is protected !!